)
ಮಂಡ್ಯ:ವಿದ್ಯುತ್ ತಂತಿ ತುಂಡಾದ ಪರಿಣಾಮ ಬೆಂಗಳೂರು- ಮೈಸೂರು ರೈಲ್ವೆ ಸಂಚಾರ ಸುಮಾರು ೪ ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತವಾದ ಘಟನೆ ತಾಲೂಕಿನ ಯಲಿಯೂರು ರೈಲು ನಿಲ್ದಾಣದ ಬಳಿ ನಡೆದಿದೆ. ಬೆಳಗ್ಗೆ ಸುಮಾರು ೧೧ ಗಂಟೆ ಸಮಯದಲ್ಲಿ ಯಲಿಯೂರು ರೈಲು ನಿಲ್ದಾಣದ ಸಮೀಪ ವಿದ್ಯುತ್ ತಂತಿ ತುಂಡಾದ ಕಾರಣ ಹಠಾತ್ತನೆ ಎಲ್ಲ ರೈಲುಗಳ ಸಂಚಾರವೂ ಸ್ಥಗಿತಗೊಂಡಿತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಪ್ರಯಾಣಿಕರ ಪರದಾಟ:
ವಿದ್ಯುತ್ ತಂತಿ ತುಂಡಾಗಿ ರೈಲು ಸಂಚಾರ ಅಸ್ತವ್ಯಸ್ಥ ಕಾರಣ ಬೆಂಗಳೂರು ಮತ್ತು ಮೈಸೂರು, ಮಂಡ್ಯ ಕಡೆಗೆ ಹೋಗಬೇಕಾಗಿದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಮಂಡ್ಯ ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತ ಹೋಗಬೇಕಾಗಿದ್ದ ಪ್ರಯಾಣಿಕರು ರೈಲು ಇಳಿದು ಮೈಸೂರು- ಬೆಂಗಳೂರು ಹೆದ್ದಾರಿಗೆ ಬಂದು ಬಸ್ಗಳನ್ನು ಏರಿ ಪ್ರಯಾಣ ಮುಂದುವರಿಸಿದರು.ಇನ್ನು ಕೆಲವು ಪ್ರಯಾಣಿಕರು ತುರ್ತಾಗಿ ಬೆಂಗಳೂರು ಮತ್ತು ಮೈಸೂರಿನತ್ತ ಪ್ರಯಾಣಿಸಬೇಕಾದವರು ಸಹ ಬೇರೆ ಬೇರೆ ವಾಹನಗಳ ಮೂಲಕ ತೆರಳುತ್ತಿದ್ದುದು ಕಂಡುಬಂತು. ಸಂಜೆಯ ವೇಳೆ ಎಲ್ಲ ರೈಲುಗಳ ಸಂಚಾರವೂ ಸರಿದಾರಿಗೆ ಬಂದಿತ್ತು. ರೈಲು ಸಂಚಾರದ ಅಸ್ತವ್ಯಸ್ಥದ ಕಾರಣದಿಂದಾಗೂ ದೂರದ ಊರುಗಳಿಗೆ ಪ್ರಯಾಣಿಸಬೇಕಾಗಿದ್ದ ಜನರು ತಡವಾಗಿ ತಮ್ಮೂರುಗಳಿಗೆ ಹೋಗಬೇಕಾದ ಅನಿವಾರ್ಯತೆಯೂ ಸೃಷ್ಠಿಯಾಗಿತ್ತು.