ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮಹಿಳೆಯು ಜೀವನ ನಿರ್ವಹಣೆ, ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾಳೆ. ಈ ನಿಟ್ಟಿನಲ್ಲಿ ಮಹಿಳೆಯರು ರಚನಾತ್ಮಕವಾಗಿ ಬೆಳೆದರೆ ಖಂಡಿತ ಸಮಾಜ ಅಭಿವೃದ್ಧಿಯಾಗಲಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ಅಭಿಪ್ರಾಯ ಪಟ್ಟರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಮಂಗಲ ಕಾರ್ಯಾಲಯದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ತಾಲೂಕು ಘಟಕ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯು ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ. ಮಹಿಳೆಯರ ರಕ್ಷಣೆಗೆ ಸದಾ ಪೊಲೀಸ್ ಇಲಾಖೆ ಬದ್ಧವಾಗಿದೆ. ತಮಗೆ ತೊಂದರೆ ಉಂಟಾದರೆ ೧೧೨ಗೆ ಕರೆ ಮಾಡಿ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಬಹುದು ಎಂದು ಹೇಳಿದರು.ಸಾಹಿತಿ ಗಿರಿಜಾ ಪಾಟೀಲ ಮಾತನಾಡಿ, ಮಹಿಳೆಯು ಬಾಲಕಿಯಿದ್ದಾಗಲೇ ತಮ್ಮ ಮಕ್ಕಳಾಟದಲ್ಲಿ ಜವಾಬ್ದಾರಿ ಮೈಗೂಡಿಸಿಕೊಳ್ಳುತ್ತಾಳೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಜಗತ್ತಿಗೆ ಕೊಡುಗೆ ನೀಡಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದಾಳೆ. ದೇಶದ ಪ್ರಗತಿಯ ಮೇಲೆಯೂ ಇವರ ಪ್ರಭಾವ ಕಾಣುತ್ತೇವೆ ಎಂದು ತಿಳಿಸಿದರು.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಸನ್ನ ಮಾತನಾಡಿ, ಸದಸ್ಯರಿಗೆ ಬ್ಯಾಂಕ್ ಆಪ್ ಬರೋಡಾದಿಂದ ಆರ್ಥಿಕ ಸಹಾಯ ನೀಡಲಾಗುತ್ತಿದೆ. ನಮ್ಮದು ಮೈಕ್ರೋ ಫೈನಾನ್ಸ್ ಕಂಪನಿಯಲ್ಲ. ಇದೊಂದು ಟ್ರಸ್ಟ್. ನಮ್ಮ ಸಂಸ್ಥೆಯು ಮಹಿಳೆಯರಿಗೆ ಎರಡನೇ ತವರು ಮನೆಯಿದ್ದಂತೆ. ನಮ್ಮ ಸಂಸ್ಥೆಯಿಂದ ಕೆರೆ ಅಭಿವೃದ್ಧಿ, ದೇವಸ್ಥಾನದ ಜೀಣೋದ್ಧಾರ, ನಿರ್ಗತಿಕರಿಗೆ ಮಾಶಾಸನ, ಮಾತೃ ವಾತ್ಸಲ್ಯ, ಪಾಲುದಾರ ಸದಸ್ಯ ಮಕ್ಕಳಿಗೆ ಶಿಷ್ಯವೇತನ ಸೇರಿದಂತೆ ಅನೇಕ ಜನಪಯೋಗಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ೧೨ನೇ ಶತಮಾನದಲ್ಲಿ ಮಹಿಳೆಯರ ಸಬಲೀಕರಣ, ಸಮಾನತೆಗಾಗಿ ವಿಶ್ವಗುರು ಬಸವಣ್ಣನವರು ಅವಕಾಶ ನೀಡಿದರು. ಇದೇ ರೀತಿಯಲ್ಲಿ ೨೧ ಶತಮಾನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಅವರು ಮಹಿಳೆಯರಿಗೆ ವಿವಿಧ ಕ್ಷೇತ್ರದಲ್ಲಿ ಸಹಾಯ-ಸಹಕಾರ ನೀಡುವ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳು, ಕಾರ್ಯಕರ್ತರು ಪ್ರಾಮಾಣಿಕ, ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಕೀಲರಾದ ರವಿ ರಾಠೋಡ, ಭಾರತಿ ಪತ್ತಾರ, ಶಿವಶರಣೆ ಮಹಿಳಾ ಸಂಸ್ಥೆಯ ಸದಸ್ಯೆ ಜ್ಯೋತಿ ಕನಮಡಿ ಮಾತನಾಡಿದರು. ತಾಲೂಕು ಸಮನ್ವಯಾಧಿಕಾರಿ ಸಂಗೀತಾ ಮಡಿವಾಳರ, ರಾಜು ಬೇಟಗೇರಿ, ಅಂಬಾಬಾಯಿ, ಮೋಹಿನ, ಕೋಮಲ, ಪ್ರೇಮ ಸೇರಿದಂತೆ ಇತರರು ಇದ್ದರು. ಯಲ್ಲಪ್ಪ ಕೊಟ್ಟರಗಿ ಸ್ವಾಗತಿಸಿದರು. ಶ್ರೀದೇವಿ ಪಾಟೀಲ ನಿರೂಪಿಸಿದರು. ರಾಜು ಕೊಕಟಗೇರಿ ವಂದಿಸಿದರು. ಇದೇ ವೇಳೆ ವಾತ್ಸಲ್ಯ ಮನೆ ಫಲಾನುಭವಿಗೆ, ನಿರ್ಗತಿಕರಿಗೆ ಮಾಶಾಸನ ಪ್ರಮಾಣ ಪತ್ರ ವಿತರಿಸಲಾಯಿತು. ನಂತರ ವಿವಿಧ ಸ್ವ-ಸಹಾಯ ಗುಂಪುಗಳ ಮಹಿಳೆಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.