ಶನಿವಾರಸಂತೆ: ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ವಿದ್ಯಾವಂತರಿಗೆ ಮಾಡಿಕೊಟ್ಟಿರುವ ಅವಕಾಶದಿಂದ ನಾವಿಂದು ಸಮಾಜದಲ್ಲಿ ಗೌರವ ಸಂಪಾದಿಸುತ್ತಿದ್ದೇವೆ ಎಂದು ಶಾಸಕ ಮಂತರ್ ಗೌಡ ಹೇಳಿದರು. ಸಮಿಪದ ಮಾದ್ರೆ ಗ್ರಾಮದ ಡಾ. ಭೀಮ್ರಾವ್ ಯುವಕ ಸಂಘ ಹಾಗೂ ಗ್ರಾಮಾಭಿವೃದ್ದಿ ಸಮಿತಿ ವತಿಯಿಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಸಮ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ಸಮಾಜದಲ್ಲಿ ಸ್ಥಾನಮಾನದಲ್ಲಿರುವರಿಗೆ, ಜನರು ಆರಿಸಿದ ಜನಪ್ರತಿನಿಧಿಗಳಿಗೆ ಜನರು ಗೌರವ ಕೊಡುವುದು ಕೇವಲ ಅವರ ಹುದ್ದೆಗೆ ಅಲ್ಲ ಬದಲಿಗೆ ಅವರು ಪಡೆದುಕೊಂಡಿರುವ ಶಿಕ್ಷಣಕ್ಕೆ ಎಂಬುವುದನ್ನು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಅವಕಾಶದಲ್ಲಿ ಸ್ಥಾನಮಾನ, ಹುದ್ದೆ ಅಧಿಕಾರ ಒಂದು ಭಾಗವಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಮತ್ತೊಂದು ಭಾಗವಾಗಿದೆ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಆಸ್ತಿಯನ್ನಾಗಿ ಮಾಡಬೇಕು. ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು ಎಂದು ಹೇಳಿದರು. ಈ ಭಾಗದಲ್ಲಿ ಮತ್ತಷ್ಟು ಗ್ರಾಮೀಣ ರಸ್ತೆ ಅಭಿವೃದ್ದಿ ಕಾರ್ಯ ಆಗಬೇಕಾಗಿದ್ದು, ಈ ಬಗ್ಗೆ ಚಿಂತನೆ ಹರಿಸಲಾಗುವುದು ಎಂದು ಹೇಳಿದರು.