ದೇಶದ ಒಟ್ಟು ಜನಸಂಖ್ಯೆಯಲ್ಲಿ ಸಿಂಹಪಾಲು ಹೊಂದಿರುವ ಯುವ ಸಮುದಾಯ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯ ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಮೀನಾ ಚಂದಾವರಕರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಸಿಂಹಪಾಲು ಹೊಂದಿರುವ ಯುವ ಸಮುದಾಯ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯ ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಮೀನಾ ಚಂದಾವರಕರ ಅಭಿಪ್ರಾಯಪಟ್ಟರು.

ಸ್ಥಳೀಯ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ನೆನಪಿನ ದೋಣಿಯಲಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಪ್ರಗತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಯುವಕರು ಸಾಧಿಸುವ ಛಲವನ್ನು ಬೆಳೆಸಿಕೊಳ್ಳಬೇಕು. ಯಶಸ್ಸು ಸಹಜವಾಗಿ ಸಿಗುವ ವಸ್ತುವಲ್ಲ. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮಬೇಕು ಎಂದರು. ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ನಿಜವಾದ ಆಸ್ತಿ. ಸಾಧನೆಯ ಮೂಲಕ ಕಲಿತಕಾಲೇಜಿಗೆ ಹೆಮ್ಮೆ ತಂದಿರುವ ಅವರು ಸಂಸ್ಥೆಯ ಪ್ರಗತಿಯಲ್ಲಿ ಕೈ ಜೋಡಿಸಬೇಕು. ಹಲವರ ತ್ಯಾಗದಿಂದ ಸಂಸ್ಥೆ ಬೆಳೆದಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಇನ್ನಷ್ಟು ಬೆಳೆಯಲು ಸಹಕರಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಹಳೆಯ ವಿದ್ಯಾರ್ಥಿಗಳು ಆಗಾಗ ಆಗಮಿಸಿ ಕಾಲೇಜಿನ ಪ್ರಗತಿಯ ಅವಲೋಕನವನ್ನು ಮಾಡಬೇಕು. ಉತ್ತಮ ಸಲಹೆಗಳನ್ನು ನೀಡುವುದರ ಮೂಲಕ ಪ್ರಗತಿಗೆ ಸಹಕರಿಸಬೇಕು ಎಂದರು. ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಇದು ಬರೀ ಸಮಾವೇಶವಲ್ಲ, ನೆನಪುಗಳ, ಸಾಧನೆಗಳ, ಗೆಳೆತನದ ಮತ್ತು ಸಂಸ್ಥೆಯ ಜೊತೆಗಿನ ಬಾಂಧವ್ಯದ ಸಂಭ್ರಮಾಚರಣೆಯಾಗಿದೆ. ಕಾಲೇಜಿನ ನಿಜವಾದ ರಾಯಭಾರಿಗಳಾಗಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ, ಸಾಧನೆ, ಯಶೋಗಾಥೆಯನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರಿಗೆ ಪ್ರೇರಣೆ ನೀಡಬೇಕು. ಜ್ಞಾನ,ಜೀವನ ಮೌಲ್ಯ ಹಾಗೂ ಸಂಸ್ಕಾರ ನೀಡಿರುವ ಮಾತೃಸಂಸ್ಥೆಯ ಬಗ್ಗೆ ಧನ್ಯತಾಭಾವ ಹೊಂದಬೇಕು ಎಂದರು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅದಕ್ಕೆ ಪ್ರಯತ್ನಗಳೂ ನಡೆದಿವೆ. ಹುನ್ನೂರು ಸಹೋದರರು, ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹಿತ ಅನೇಕರು ಆರ್ಥಿಕ ಬೆಂಬಲ ನೀಡಿದ್ದನ್ನು ಸ್ಮರಿಸಿದರು. ನವನಗರದಲ್ಲಿ ಒದಗಿಸಲಿರುವ ಶೈಕ್ಷಣಿಕ ಸೌಲಭ್ಯಗಳಿಗೆ ಹಳೆಯ ವಿದ್ಯಾರ್ಥಿಗಳು ಸಹಾಯ-ಸಹಕಾರ ನೀಡಬೇಕು ಎಂದರು.ಯುಜಿಸಿ ನೆಟ್, ಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮತ್ತು ಪಿಎಚ್‌ಡಿ ಪಡೆದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಪರವಾಗಿ ಡಾ.ಎಸ್.ಆರ್.ನಾಗಣ್ಣವರ, ಡಾ.ಎಸ್.ಎಂ.ಖೋತ,ಪಿ.ಬಿ.ಭಜಂತ್ರಿ, ರವಿ ಕುಲಕರ್ಣಿ, ಎಸ್.ಟಿ.ಸಿದ್ದಲಿಂಗಪ್ಪನವರ, ಸಿ.ಎಲ್.ಹೂಗಾರ, ನಾಗಲಕ್ಷ್ಮಿ ರಾಯಚೂರ ಮತ್ತು ಪರಶುರಾಮ ಜಾಧವ, ನಿವೃತ್ತ ಪ್ರಾಧ್ಯಾಪಕ ಎಸ್.ಬಿ.ಪರ್ವತೀಕರ ಮಾತನಾಡಿದರು.ಕೀರ್ತಿದಾಸರ ಹಾಗೂ ಶ್ವೇತಾಕುಲಕರ್ಣಿ ಪ್ರಾರ್ಥಿಸಿದರು. ಡಾ.ಎಸ್.ಎಸ್.ಹಂಗರಗಿ ಪರಿಚಯಿಸಿದರು. ಸಂಯೋಜಕ ಎಸ್.ವೈ.ಬೊಮ್ಮಣ್ಣವರ ವಂದಿಸಿದರು. ಎಂ.ಡಿ.ಕೋರವಾರ ನಿರೂಪಿಸಿದರು. ಕಾಲೇಜು ನಡೆದು ಬಂದ ಬಗೆ ಕುರಿತಕಿರುಚಿತ್ರ ಗಮನ ಸೆಳೆಯಿತು. ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಪಿ.ಎಸ್.ಹುಯಿಲಗೋಳ, ಆರ್.ಆರ್.ದೇಶಮುಖ, ಜಿ.ಜೆ.ಮೊರಬ, ಎಂ.ವಿ.ಮಹಾಡೀಕರ, ವಿ.ಎಸ್.ಮಠ, ಎಸ್.ಕೆ.ದೇಸಾಯಿ, ಆರ್.ಎಸ್.ದೇಸಾಯಿ ಉಪಸ್ಥಿತರಿದ್ದರು.