ಕನ್ನಡಪ್ರಭ ವಾರ್ತೆ ಸಂಡೂರು
ಭಾರತದ ಹಿಂದೂ ಅರಸರ, ಮಧ್ಯಕಾಲದ ಮುಸ್ಲಿಂ ಅರಸರ, ಮರಾಠರ ಆಳ್ವಿಕೆಯಲ್ಲಿ, ಭಕ್ತಿಪಂಥದಲ್ಲಿ, ಶರಣ ಸಾಹಿತ್ಯದಲ್ಲಿ, ವಚನ ಸಾಹಿತ್ಯದಲ್ಲಿ, ಬುದ್ಧ, ಬಸವ, ಅಂಬೇಡ್ಕರ ಅವರ ಚಿಂತನೆಗಳಲ್ಲಿ ಸಮಾಜ ಕಾರ್ಯ ಕಾಣಬಹುದಾಗಿದೆ ಎಂದು ಸ್ಮಯೋರ್ ಸಂಸ್ಥೆಯ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ. ಸಿ.ಆರ್. ಗೋಪಾಲ್ ಹೇಳಿದರು.ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ, ಕೌಶಲ್ಯ, ಕುಶಲತೆ, ಹಾಗೂ ಅವಶ್ಯಕ ಸಾಮರ್ಥ್ಯ ಅಭಿವೃದ್ಧಿಯ ಕಡೆ ಗಮನ ನೀಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಾರ್ಯ ಆಧ್ಯಯನ ವಿಭಾಗದ ಉಪನ್ಯಾಸಕ ಲಕ್ಷ್ಮಣ ತೋಳಿ, ವಿಶ್ವ ಸಮಾಜಕಾರ್ಯ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ ಮೂರನೇ ಮಂಗಳವಾರದಂದು ವಿಶ್ವದ ಸುಮಾರು ೧೯೧ ದೇಶಗಳಲ್ಲಿ ಆಚರಿಸಲಾಗುತ್ತದೆ. ಸಮಾಜಕಾರ್ಯ ಒಂದು ವೃತ್ತಿಪರ ಸೇವೆಯಾಗಿದ್ದು, ಮಾನವ ಸಂಪನ್ಮೂಲ, ಮಾನಸಿಕ ಆರೋಗ್ಯ, ಮಹಿಳಾ ಕಲ್ಯಾಣ, ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಏಕೈಕ ವೃತ್ತಿಯಾಗಿದೆ. ಇಂದಿನ ಕೃತಕ ಬುದ್ದಿಮತ್ತೆ ಯುಗದಲ್ಲಿ ಇದರ ವ್ಯಾಪ್ತಿ ಇನ್ನೂ ಹೆಚ್ಚಾಗಿದೆ ಎಂದು ತಿಳಿಸಿದರು.
ಡಾ. ಹನುಮಂತ ಜಿ. ಮಾತನಾಡಿ, ಅಧುನಿಕ ಸಾಮಾಜಿಕ ಸಮಸ್ಯೆಗಳು ಬದಲಾದಂತೆ ವೃತ್ತಿಪರ ಸಮಾಜ ಕಾರ್ಯಕರ್ತರಲ್ಲಿ ಕೌಶಲ್ಯಗಳು, ಜ್ಞಾನ, ನಡವಳಿಕೆಗಳು ವೈಜ್ಞಾನಿಕತೆ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದರು.ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಮರಿಗೌಡ ಹಾಗೂ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕಿ ಡಾ. ಸುಮಾ ಕೆ.ಜಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಅಪ್ತಸಮಾಲೋಚಕರಾದ ಪತ್ರೆಗೌಡ, ಉಪನ್ಯಾಸಕರಾದ ಹನುಮಂತ ಎನ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಯಾದ ಶೋಹೆಬ್ ನಿರ್ವಹಿಸಿದರೆ, ಮಹೇಂದ್ರನಾಯ್ಕ ಸ್ವಾಗತಿಸಿದರು, ಪ್ರಿಯಾಂಕ ವಂದಿಸಿದರು.