ಕುಮಾರಸ್ವಾಮಿಯನ್ನು ಗೆಲ್ಲಿಸಿದ್ರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುವುದೆಲ್ಲಾ ಬರೀ ಸುಳ್ಳು. ಇದೆಲ್ಲವೂ ಜನರಿಗೆ ಮಂಕುಬೂದಿ ಎರಚುವ ತಂತ್ರವಷ್ಟೇ. ಅವರ ಮಾತುಗಳಿಗೆ ಮರುಳಾಗಿ ಮೋಸಹೋಗದಿರಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮತದಾರರನ್ನು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕುಮಾರಸ್ವಾಮಿಯನ್ನು ಗೆಲ್ಲಿಸಿದ್ರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುವುದೆಲ್ಲಾ ಬರೀ ಸುಳ್ಳು. ಇದೆಲ್ಲವೂ ಜನರಿಗೆ ಮಂಕುಬೂದಿ ಎರಚುವ ತಂತ್ರವಷ್ಟೇ. ಅವರ ಮಾತುಗಳಿಗೆ ಮರುಳಾಗಿ ಮೋಸಹೋಗದಿರಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮತದಾರರನ್ನು ಎಚ್ಚರಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಡಾ ಮಾಜಿ ಅಧ್ಯಕ್ಷ ಅಸಾದುಲ್ಲಾಖಾನ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಅನ್ಯ ಪಕ್ಷದವರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲೇ ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ಸೂಚಿಸಲಾಗಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದಾಗಲೂ ಪರಿಹಾರ ದೊರಕಿಸುವ ಪ್ರಯತ್ನ ನಡೆಯಲಿಲ್ಲ. ಈಗ ಸಂಸದರಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವುದಾಗಿ ಹೇಳಿದರೆ ಜನರು ಅದನ್ನು ನಂಬುವಷ್ಟು ದಡ್ಡರಲ್ಲ ಎಂದು ಕುಟುಕಿದರು.
ಜನರು ಸುಳ್ಳು ಮಾತಿಗೆ ಮರಳಾಗುವುದಿಲ್ಲ:
ಮಂಡ್ಯ ಜನರನ್ನು ಕೇವಲ ಅಭಿವೃದ್ಧಿಯ ಭ್ರಮೆಯಲ್ಲಿರಿಸುತ್ತಲೇ ಬಂದಿದ್ದೀರಿ. ಚುನಾವಣೆಯಲ್ಲಿ ಗೆಲ್ಲಲು ಮತ್ತೆ ಅದೇ ಭ್ರಮೆಯನ್ನೇ ಹುಟ್ಟುಹಾಕುತ್ತಿದ್ದಾರೆ. ಜನರು ಪ್ರಜ್ಞಾವಂತರಾಗಿದ್ದಾರೆ. ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸುಲಭವಾಗಿ ಸುಳ್ಳು ಮಾತುಗಳಿಗೆ ಮರುಳಾಗುವುದಿಲ್ಲ ಎಂದರು.
ಮುಡಾ ಮಾಜಿ ಅಧ್ಯಕ್ಷ ಅಸಾದುಲ್ಲಾಖಾನ್ ನೇತೃತ್ವದಲ್ಲಿ ನೂರಾರು ಮಂದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಸಂತಸ, ಕಾಂಗ್ರೆಸ್ ಸರ್ಕಾರ ಕೊಟ್ಟ ೫ ಗ್ಯಾರಂಟಿ ಯೋಜನೆಗಳು ಪಕ್ಷ ಗೆಲ್ಲಲು ನೆರವಾಗುತ್ತಿವೆ ಎಂದರು.ಮುಡಾ ಮಾಜಿ ಅಧ್ಯಕ್ಷ ಅಸಾದುಲ್ಲಾಖಾನ್ ಮಾತನಾಡಿ, ಜಿಲ್ಲೆಯ ನಾಯಕರಾದ ಎನ್.ಚಲುವರಾಯಸ್ವಾಮಿ ಮಾರ್ಗದರ್ಶದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಇಂದು ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀವೇ ಹೊಸ ಯೋಜನೆಯನ್ನು ರೂಪಿಸುವಂತೆ ಮನವಿ ಮಾಡಿದರು.ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ಚಂದ್ರುರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊತ್ತವರಲ್ಲಿ ನಾವೂ ಒಬ್ಬರು, ಅತಿ ಹೆಚ್ಚು ಮತಗಳಿಂದ ಅವರನ್ನು ಗೆಲ್ಲಿಸಿ ನಿಮ್ಮ ಕೈ ಬಲಪಡಿಸುತ್ತೇವೆ ಎಂದರು.ನಮ್ಮ ಅಣ್ಣ ಜಫುಲ್ಲಾಖಾನ್ ಅವರನ್ನು ಕೋರಿಕೋಂಡಿದ್ದೇವೆ, ಈ ವರ್ಷ ಮಂಡ್ಯಕ್ಕೆ ಬರಬೇಡ, ಈ ಚುನಾವಣೆಯನ್ನು ನಮಗೆ ಬಿಟ್ಟುಬಿಡು ಎಂದು ಮಾತುಕತೆ ಮಾಡಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ದಡದಪುರ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಬಿಉಲ್ಲಾಖಾನ್, ಅಜ್ಮಲ್ ಫಾಷಾ, ನಹೀಂ, ಅಮೀದ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.