ವಾರದೊಳಗೆ ವಸತಿ ಶಾಲೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ: ನ್ಯಾ.ಹೊನೋಲೆ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನೋಲೆ ಅವರು ದಿಢೀರ್‌ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನೋಲೆ ಅವರು ದಿಢೀರ್ ಭೇಟಿ ನೀಡಿ, ವಸತಿ ಶಾಲೆಯ ಕ್ಲಾಸ್ ರೂಮ್, ವಸತಿ ಗೃಹ, ಬಾಲಕ ಮತ್ತು ಬಾಲಕಿಯರ ಶೌಚಾಲಯ, ಸ್ನಾನ ಗೃಹ ಹಾಗೂ ಅಡುಗೆ ಕೋಣೆ, ಉಗ್ರಾಣ ಪರಿಶೀಲಿಸಿದ ಬಳಿಕ ವಸತಿ ಶಾಲಾ ಸಮಸ್ಯೆಗಳನ್ನು ಮಕ್ಕಳಿಂದ ತಿಳಿದುಕೊಂಡರು.

ಈ ವೇಳೆ ಮಾತನಾಡಿದ ಅವರು, ಶಾಲೆಗೆ ಶಿಕ್ಷಕರು ಹಾಜರಾಗದಿರುವುದು, ಮಕ್ಕಳಿಗೆ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಅಲ್ಲದೆ ಶಾಲೆಯಲ್ಲಿ ಇನ್ನು ಸಮಸ್ಯೆಗಳಿದ್ದು, ನೀವು ಯಾವ ಪುರುಷಾರ್ಥಕ್ಕಾಗಿ ಶಾಲೆ ನಡೆಸುತ್ತೀರಿ, ನಿಮ್ಮ ಕೈಯಲ್ಲಿ ಆಗದಿದ್ದರೆ ಬಿಟ್ಟು ಹೋಗಿ. ಇಲ್ಲ ಒಂದು ವಾರದಲ್ಲಿ ಎಲ್ಲ ಸಮಸ್ಯೆ ಸರಿಪಡಿಸಬೇಕು ಎಂದು ವಸತಿ ಶಾಲೆಯ ಪ್ರಾಚಾರ್ಯರಿಗೆ ಖಡಕ್ ಸೂಚನೆ ನೀಡಿದರು.

6 ರಿಂದ 10ನೇ ತರಗತಿವರೆಗೆ 250 ಮಕ್ಕಳು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 160 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 8 ಜನ ಖಾಯಂ ಶಿಕ್ಷಕರಿದ್ದಾರೆ. 4 ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರಿಲ್ಲ. ಮೂರು ಜನ ನಿಯೋಜನೆ ಮೇಲೆ ಹಾಗೂ ಐದು ಜನ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಣಿತ ಸರಿಗತಿ ಸರಿಯಾಗಿ ನಡೆಯುತ್ತಿಲ್ಲ, ಅಲ್ಲದೆ ಲ್ಯಾಬ್ ಸಹ ನಡೆಯುವುದಿಲ್ಲ ಎಂದು ಮಕ್ಕಳು, ನ್ಯಾಯಾಧೀಶರ ಗಮನಕ್ಕೆ ತಂದರು. ಈ ಶಾಲೆಯ ಯಾವ ಮಕ್ಕಳಿಗೂ ಮಲಗಲು ಬೆಡ್‌ಗಳಿಲ್ಲ. ಮಂಚದ ಮೇಲೆ ಬೆಡ್‌ಶೀಟ್ ನೊಂದಿಗೆ ಮಲಗಬೇಕು. ಅಲ್ಲದೆ ಕಿಟಕಿ ಬಾಗಿಲುಗಳು ಮುರಿದುಹೋಗಿವೆ. ಚಳಿ ಜಾಸ್ತಿ ಇರುವುದರಿಂದ ಮಲಗಲು ಆಗುತ್ತಿಲ್ಲ. ನಮ್ಮಲ್ಲಿ ಸುಮಾರು ಜನರಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ. ಕಿಟಕಿ ರಿಪೇರಿ ಮಾಡಲು ಮುಂದಾಗುತ್ತಿಲ್ಲ. ಶೌಚಾಲಯಗಳಿಗೆ ಬಾಗಿಲುಗಳೆ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಶೌಚಾಲಯಕ್ಕೆ ಹೋಗಲು ಮುಜುಗರವಾಗುತ್ತಿದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.

ದಿನಾಲು ಅಡುಗೆಯವರು ಬೆಳಗ್ಗೆ ಬರುವುದಿಲ್ಲ. 10.30ರಿಂದ 11ಗಂಟೆಗೆ ಬರುತ್ತಾರೆ. ಬಂದ ಮೇಲೂ ನಾವು ಹೇಳಿದ ಅಡುಗೆ ಮಾಡುವುದಿಲ್ಲ. ಕೇಳಿದರೆ ಮನೆಯವರಿಂದ ಇಲ್ಲವೆ ಸಂಘಟನೆಗಳಿಂದ ಹೆದರಿಸುತ್ತಾರೆ, ನಾವೇನು ಮಾಡಬೇಕು. ಯಾರು ಮುಂದೆಯೂ ಹೇಳಿಕೊಳ್ಳದೆ ಅಸಹಾಯಕರಾಗಿದ್ದೇವೆ. ಅಲ್ಲದೆ ಶಿಲ್ಪಾ ಎನ್ನುವ ಮಹಿಳೆ ಇಲ್ಲಿ ಕಾಯಂ ಕೆಲಸ ಮಾಡುತ್ತಾರೆ. ಆದರೆ, ಅವರು ಸುಮಾರು ತಿಂಗಳಿಂದ ಕೆಲಸಕ್ಕೆ ಬರುತ್ತಿಲ್ಲ. ಅವರ ಬದಲಿಗೆ ಅನಿತಾ ಎನ್ನುವ ಮಹಿಳೆ ಕೆಲಸಕ್ಕೆ ಬರುತ್ತಾಳೆ. ಅನಿತಾಳಗೆ ತಿಂಗಳಿಗೆ 8 ಸಾವಿರ ರು. ಶಿಲ್ಪಾ ಕೊಡುತ್ತಾರೆ. ಪ್ರತಿ ತಿಂಗಳು ನಾವು ಶಿಲ್ಪಾ ಅವರಿಗೆ ಸಂಬಳ ಮಾಡುತ್ತಿರುವುದಾಗಿ ವಸತಿ ಶಾಲೆಯ ಮುಖ್ಯಸ್ಥರು ನ್ಯಾಯಾಧೀಶರ ಗಮನಕ್ಕೆ ತರುತ್ತಿದ್ದಂತೆ, ಕೆಂಡಮಂಡಲರಾದ ನ್ಯಾಯಾಧೀಶರು ಏನಾದರೂ ಆದರೆ, ಅದಕ್ಕೆ ಜವಾಬ್ಧಾರಿ ಯಾರು? ನಾಳೆಯಿಂದ ಅವರೇ ಕೆಲಸಕ್ಕೆ ಬರಲಿ ಇಲ್ಲದಿದ್ದರೆ ಬೇರೆ ಯಾರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಡಿ ಎಂದು ನ್ಯಾಯಧೀಶರು ಸೂಚಿಸಿದರು.

ಈ ವೇಳೆ ಜಿಲ್ಲಾ ಪ್ಯಾನಲ್ ಅಡ್ವಕೇಟ್ ಕೃಷ್ಣವೇಣಿ ಬಿ., ವಸತಿ ಶಾಲೆಯ ಪ್ರಾಚಾರ್ಯ ಸಿದ್ದು ಪೂಜಾರಿ, ವಾರ್ಡನ್ ರಾವುತಪ್ಪ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ ಇದ್ದರು.

ವಸತಿ ಶಾಲೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸುವಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು. ಅಡುಗೆಯವರು ಸರಿಯಾದ ಸಮಯಕ್ಕೆ ಬರದಿದ್ದರೆ ಅವರನ್ನು ಒಳಗಡೆ ಸೇರಿಸಿಕೊಳ್ಳಬಾರದೆಂದು ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾದರೆ ಸಹಿಸುವುದಿಲ್ಲ.

ರವೀಂದ್ರ ಹೊನೋಲೆ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

Share this article