ಸೋಮವಾರಪೇಟೆ: ಅನಧಿಕೃತ ಕೋರೆ ಬಂದ್‌

KannadaprabhaNewsNetwork |  
Published : Nov 10, 2025, 02:00 AM IST
ಅನಧಿಕೃತ ಕೋರೆಗಳನ್ನು ಮುಚ್ಚಿಸಿದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು | Kannada Prabha

ಸಾರಾಂಶ

ನಿಯಮ ಮೀರಿ ನಡೆಯುತ್ತಿದ್ದ 18 ಕಲ್ಲುಕೋರೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅನಧಿಕೃತವಾಗಿ ನಡೆಯುತ್ತಿರುವ ಕೋರೆಗಳನ್ನು ಮುಚ್ಚಿಸಿದ ಘಟನೆ ನಡೆದಿದೆ.

ಕನ್ನಡಪ್ರಭವಾರ್ತೆ, ಸೋಮವಾರಪೇಟೆ

ತಾಲೂಕಿನ ಯಲಕನೂರು, ಹೊಸಳ್ಳಿ ಗ್ರಾಮಗಳಲ್ಲಿ ನಿಯಮ ಮೀರಿ ನಡೆಯುತ್ತಿದ್ದ 18 ಕಲ್ಲುಕೋರೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅನಧಿಕೃತವಾಗಿ ನಡೆಯುತ್ತಿರುವ ಕೋರೆಗಳನ್ನು ಮುಚ್ಚಿಸಿದ ಘಟನೆ ಮಂಗಳವಾರ ನಡೆಯಿತು.ಬೆಳಗ್ಗೆಯಿಂದಲೇ ಸಾಕಷ್ಟು ಬೃಹತ್ ಲಾರಿಗಳಲ್ಲಿ ಕಲ್ಲನ್ನು ಸಾಗಿಸುತ್ತಿದ್ದರಿಂದ, ಹಲವು ಜನರ ಆರೋಗ್ಯಕ್ಕೆ ಗಂಭೀರ ತೊಂದರೆ ಅನುಭವಿಸುತ್ತಿರುವುದಾಗಿ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಭೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಸ್ಥಳ ಪರಿಶೀಲನೆ ಮಾಡಿ, ಸರ್ವೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಯಲಕನೂರು-ಹೊಸಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ 18 ಕ್ಕೂ ಹೆಚ್ಚು ಕಲ್ಲುಕೋರೆಗಳು ನಡೆಯುತ್ತಿದ್ದು, ಸುತ್ತ ಕನಿಷ್ಠ ತಂತಿ ಬೇಲಿ ಅಳವಡಿಸದೆ, ಕಲ್ಲುಕೋರೆಗಳನ್ನು ನಡೆಸಲಾಗುತ್ತಿತ್ತು. ಇದರೊಂದಿಗೆ ಯಾವುದೇ ಕೋರೆಗಳಿಗೆ ಬ್ಲಾಸ್ಟಿಂಗ್ ಗೆ ಅವಕಾಶ ಇಲ್ಲದಿದ್ದರೂ ಬ್ಲಾಸ್ಟಿಂಗ್ ಮಾಡಿ ಕಲ್ಲನ್ನು ತೆಗೆಯಲಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ನೂರಾರು ಕುಟುಂಬಗಳು ದಿನಂಪ್ರತಿ ಭಯದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಈ ಕುರಿತು ಸಾಕಷ್ಟು ಭಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗದ ಬಗ್ಗೆ ಗ್ರಾಮಸ್ಥರು ದೂರಿದ್ದರು.

ಆದರೆ, ಸ್ಥಳಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳು ಸ್ಥಳದ ಯಾವುದೇ ದಾಖಲೆಯನ್ನು ತರದೆ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ ಮಾಡಲಾಗುತ್ತಿದೆ. ಪರವಾನಗಿ ನೀಡಿರುವ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕೋರೆ ನಡೆಸಲಾಗುತ್ತಿದೆ. ಕಳೆದ ಒಂದುವರೆ ವರ್ಷದಿಂದ ಇದರ ವಿರುದ್ಧ ಹಲವು ಬಾರಿ ದೂರು ನೀಡಿದ್ದೇವೆ. ಆದರೂ ಅಕ್ರಮ ಗಣಿಗಾರಿಕೆಗಳ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ.ಇದೀಗ ಕಲ್ಲುಕೋರೆಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಅಷ್ಟೆ. ಈಗಲಾದರೂ ಸೂಕ್ತ ಕಾನೂನು ಕ್ರಮಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಲ್ಲುಕೋರೆಗಳ ಬಗ್ಗೆ ಸಮಗ್ರ ತನಿಖೆ ಮಾಡುವ ಮೂಲಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅನಿಲ್, ರಾಜೇಶ್ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭ ಅರಣ್ಯ ಇಲಾಖೆಯ ಆರ್‌ಎಫ್‌ಒ ಶೈಲೇಂದ್ರಕುಮಾರ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೋಜಾ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮಸ್ಥರು ಇದ್ದರು.

ಸಾಕಷ್ಟು ಸಮಯದಿಂದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಆದರೂ, ಪರಿಶೀಲನೆಗೆ ಬರುವಾಗ ಅಧಿಕಾರಿಗಳು ಯಾವುದೇ ದಾಖಲೆಗಳಿಲ್ಲದೆ ಬಂದಿರುವುದು ಖಂಡನೀಯ. ಯಾವ ಕಾರಣಕ್ಕೆ ಪರಿಶೀಲನೆ ಮಾಡಲು ಬರುತ್ತಾರೆ. ಈ ಭಾಗದಲ್ಲಿ ಇನ್ನಷ್ಟು ಕಲ್ಲುಕೋರೆಗಳಿಗೆ ಅವಕಾಶ ನೀಡಲು ಬಂದಿದ್ದೀರಾ

ಬೋಜೆಗೌಡ ಸ್ಥಳೀಯ ಗ್ರಾಮಸ್ಥ

ಈ ಭಾಗದ ಗ್ರಾಮಸ್ಥರ ಮನವಿಯಂತೆ ಸೂಕ್ತ ರೀತಿಯ ತನಿಖೆ ನಡೆಸಿ, ಇಲ್ಲಿ ನಡೆದಿರುವ ಕಲ್ಲುಕೋರೆಗಳ ಬಗ್ಗೆ ವಿಸ್ತೃತ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಸಲ್ಲಿಸಲಾಗುವುದು .

ಸಂದೀಪ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ

PREV

Recommended Stories

ಇಂದು ಹಂಡ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
ಯಯೂದಿ ತತ್ವಗಳಿಗೂ, ಗೀತೆಗೂ ಸಾಮ್ಯತೆ ಇದೆ: ಪ್ರೊ.ಆ್ಯಲನ್‌