ಕನ್ನಡಪ್ರಭ ವಾರ್ತೆ ಭಾರತೀನಗರಕೆ.ಶೆಟ್ಟಹಳ್ಳಿಯಲ್ಲಿ ವೃದ್ಧೆ ಮೇಲೆ ಮಗ, ಸೊಸೆ ದೌರ್ಜನ್ಯ ನಡೆಸಿದ ದೂರಿನ ಮೇರೆಗೆ ತಹಸೀಲ್ದಾರ್ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ಸ್ಪೆಕ್ಟರ್ ಆನಂದ್ ಅವರು ಮಗ, ಸೊಸೆಗೆ ಬುದ್ದಿ ಹೇಳಿ ರಾಜೀ ಸಂಧಾನ ಮಾಡಿಸುವುದಾಗಿ ತಿಳಿಸಿ, ಕರ್ನಾಟಕ ರಾಜ್ಯ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್ ಅವರಿಗೆ ದೂರು ಸಲ್ಲಿಸಿದ್ದರು. ನಂತರ ತಹಸೀಲ್ದಾರ್ ಸೋಮಶೇಖರ್, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಅಧಿಕಾರಿಗಳು ಸೇರಿದಂತೆ ಹಲವರ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಜನೀರಾಜ್ ಅವರ ಮನವಿ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್, ಸಬ್ ಇನ್ಸ್ ಪೆಕ್ಟರ್ ರಾಮಸ್ವಾಮಿ, ಧ್ವನಿ ಸಂಸ್ಥೆ ಮಂಗಳ ಅವರೊಡಗೂಡಿ ಗ್ರಾಮಕ್ಕೆ ಭೇಟಿ ನೀಡಿ ವೃದ್ಧೆಯಿಂದ ದೂರು ಆಲಿಸಿದರು.ಮಗ ಸುರೇಶ್, ಸೊಸೆ ರೇಣುಕಾ ಅವರನ್ನು ವಿಚಾರಿಸಲು ಮುಂದಾದಾಗ ಸ್ಥಳದಲ್ಲಿ ಇಬ್ಬರೂ ಇರಲಿಲ್ಲ. ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಮಸ್ವಾಮಿ ಅವರಿಗೆ ಮಗ, ಸೊಸೆಯನ್ನು ಠಾಣೆಗೆ ಕರೆಸಿ ಹಲ್ಲೆ ನಡೆಸದಂತೆ ಮುಚ್ಚಳಿಕೆ ಬರೆಯಿಸಿಕೊಳ್ಳಬೇಕೆಂದು ತಹಸೀಲ್ದಾರ್ ಸೂಚನೆ ನೀಡಿದರು.
ಉಪತಹಸೀಲ್ದಾರ್ ಶಿವಲಿಂಗಯ್ಯ, ಕೆ.ಶೆಟ್ಟಹಳ್ಳಿ ಗ್ರಾ.ಪಂ ಪಿಡಿಒ ದಯಾನಂದ್ ಸೇರಿದಂತೆ ಮತ್ತಿತರರಿದ್ದರು.