ವಿಜಯಪುರದಲ್ಲಿ ಶೀಘ್ರ ಮೈಸೂರು ಸೋಪ್‌ ಫ್ಯಾಕ್ಟರಿ

KannadaprabhaNewsNetwork | Published : Jan 12, 2025 1:15 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರ ಹೊರವಲಯದ ಇಟ್ಟಂಗಿಹಾಳ ಬಳಿಯ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಿಸಿದ್ದಾರೆ. ನಗರದ ಶಿವಾನುಭವ ಮಂಟಪದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಆಯೋಜಿಸಿರುವ ಮೈಸೂರ್ ಸ್ಯಾಂಡಲ್ ಸಾಬೂನು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರ ಹೊರವಲಯದ ಇಟ್ಟಂಗಿಹಾಳ ಬಳಿಯ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಿಸಿದ್ದಾರೆ. ನಗರದ ಶಿವಾನುಭವ ಮಂಟಪದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಆಯೋಜಿಸಿರುವ ಮೈಸೂರ್ ಸ್ಯಾಂಡಲ್ ಸಾಬೂನು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿಯೇ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಚಿವ ಎಂ.ಬಿ.ಪಾಟೀಲ ಅವರು ಮುಂದಿನ ಸಂಕ್ರಾಂತಿಯೊಳಗೆ ಜಿಲ್ಲೆಯಲ್ಲಿಯೇ ಒಂದು ಸಾಬೂನು ಕಾರ್ಖಾನೆ ಘಟಕ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ ಅವರು, ಇಟ್ಟಂಗಿಹಾಳ ಬಳಿ 10 ಎಕರೆ ಜಮೀನು ನೀಡಲಾಗುವುದು. ಒಂದೆರಡು ದಿನಗಳಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮೈಸೂರು ಮಹಾರಾಜರು ನೀರಾವರಿಗಾಗಿ ಕೆಆರ್‌ಎಸ್ ಡ್ಯಾಂ, ಕೈಗಾರಿಕೆಗಾಗಿ ಕೆಎಸ್‌ಡಿಎಲ್ ಮತ್ತು ಶಿಕ್ಷಣಕ್ಕಾಗಿ ನಾನಾ ಸಂಸ್ಥೆಗಳನ್ನು ಪ್ರಾರಂಭಿಸಿ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಸಾಬೂನು ಸಂಸ್ಥೆ ಇತ್ತೀಚೆಗೆ ಗೊಂದಲದಿಂದ ಕೂಡಿ ಅಪಖ್ಯಾತಿಯನ್ನು ಪಡೆದಿತ್ತು. ನಾನು ಸಚಿವನಾದ ನಂತರ ಸೂಕ್ತ ಕ್ರಮ ಕೈಗೊಂಡು ಸುಮಾರು 20 ಹೊಸ ಉತ್ಪನ್ನಗಳನ್ನು ಹೊರತಂದು ಸಂಸ್ಥೆಯನ್ನು ಗತವೈಭವಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಕಿರಾಣಿ ಅಂಗಡಿಯಿಂದ ಇಂಗ್ಲೆಂಡ್ ಸೂಪರ್ ಮಾರ್ಕೆಟ್‌ವರೆಗೂ ನಮ್ಮ ಮಳಿಗೆ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಇಂದಿನ ಪೈಪೋಟಿಯ ಯುಗದಲ್ಲಿ ನಾವೂ ಕೂಡ ನಮ್ಮ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಿ, ಪ್ರಚಾರ ಮಾಡಿ, ಮನೆಮನೆಗೆ ತಲುಪಿಸುವ ಮೂಲಕ ಇತರ ಕಂಪನಿಗಳಿಗೆ ಸ್ಪರ್ಧೆಗಿಳಿಯಬೇಕು. ಜಾತ್ರೆ ಮತ್ತು ಇತರೆ ಸಾಂಸ್ಕೃತಿಕ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಬೂನು ಮೇಳ ಆಯೋಜಿಸಿ ರಿಯಾಯಿತಿ ದರದಲ್ಲಿ ಸಾಬೂನು ಮಾರಾಟ ಮಾಡಬೇಕು. ಈ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಪ್ರಚಾರಕ್ಕೆ ಪ್ರತಿಯಾಗಿ ನಮ್ಮ ವಸ್ತುಗಳ ಪ್ರಚಾರ ಕೈಗೊಳ್ಳಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್‌ನ ಗುಣಮಟ್ಟ ಎಂದೂ ಬದಲಾಗಿಲ್ಲ. ಅಗರಬತ್ತಿ, ಸೌಂದರ್ಯವರ್ಧಕ ವಸ್ತುಗಳು, ಬಟ್ಟೆ ಒಗೆಯುವ ಸಾಬೂನುಗಳು, ಧೂಪ್, ಸಾಂಬ್ರಾಣಿ ಸೇರಿದಂತೆ ಇನ್ನೂ ಹೆಚ್ಚು ಹೊಸ ಹಸೊ ಉತ್ಪನ್ನಗಳ ಪರಿಚಯ ಮಾಡಲು ಸಚಿವ ಎಂ.ಬಿ.ಪಾಟೀಲರು ಸಾಕಷ್ಟು ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ, ಕೆಎಸ್‌ಡಿಎಲ್‌ನ ಅಧಿಕಾರಿಗಳಾದ ಎಂ.ಗಂಗಪ್ಪ, ರುದ್ರೇಶ.ಬಿ.ಕೆ, ವಿಜಯಮಹಾಂತೇಶ ಕಾಮತ, ಅರವಿಂದ ಬನಸೋಡೆ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗು ಸಜ್ಜನ, ಗುರು ಗಚ್ಚಿನಮಠ, ರಾಜು ಮಗಿಮಠ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ.ಪಿ.ಕೆ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.----------

ಕೋಟ್‌........

ವಿಜಯಪುರದಲ್ಲಿ ಕೆಎಸ್‌ಡಿಎಲ್ ಘಟಕ ಸ್ಥಾಪಿಸುವ ಸಚಿವ ಎಂ.ಬಿ.ಪಾಟೀಲರ ನಿರ್ಧಾರ ಸ್ವಾಗತಾರ್ಹ. ಇದರಿಂದ 400 ಯುವಕರಿಗೆ ಉದ್ಯೋಗ ಸಿಗಲಿದ್ದು, ಮುಂದಿನ ವರ್ಷದಲ್ಲಿ ವಿಜಯಪುರದಲ್ಲಿಯೇ ರಾಜ್ಯದಲ್ಲಿ ಅತೀ ಹೆಚ್ಚು ಮೈಸೂರು ಸ್ಯಾಂಡಲ್ ಸೋಪ್ ಮಾರಾಟದಲ್ಲಿ ಮುಂಚೂಣಿಯಲ್ಲಿರಲಿದೆ. ನಾವು ಕೂಡ ಈ ಉತ್ಪನ್ನಗಳ ಪ್ರಚಾರ ಮಾಡುತ್ತೇವೆ.

- ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ

Share this article