ಪುತ್ತೂರಲ್ಲಿ ದ.ಭಾರತದ ಅತಿದೊಡ್ಡ ಜೇನು ಸಂಸ್ಕರಣ ಘಟಕ

KannadaprabhaNewsNetwork |  
Published : May 05, 2025, 12:50 AM IST
ಪುತ್ತೂರಿನಲ್ಲಿ ಸಿದ್ಧಗೊಳ್ಳುತ್ತಿರುವ ಜೇನು ಸಂಸ್ಕರಣಾ ಘಟಕ | Kannada Prabha

ಸಾರಾಂಶ

ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಜೇನಿನ ಬಹು ಉತ್ಪನ್ನ ಸಂಸ್ಕರಣಾ ಘಟಕ ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದೆ. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ.

ಸಂಶುದ್ಧೀನ್ ಸಂಪ್ಯಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಜೇನಿನ ಬಹು ಉತ್ಪನ್ನ ಸಂಸ್ಕರಣಾ ಘಟಕ ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದೆ. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ.ಪುತ್ತೂರು ತಾಲೂಕಿನ ಮುಂಡೂರು ಎಂಬಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಜೇನು ಸಂಸ್ಕರಣ ಘಟಕವನ್ನು ವಿಶಾಲವಾದ ಕಟ್ಟಡದಲ್ಲಿ ಸ್ಥಾಪಿಸಿದ್ದು, ಇಲ್ಲಿ ತಿಂಗಳಿಗೆ ಸುಮಾರು 300 ಮೆಟ್ರಿಕ್ ಟನ್‌ಗಳಷ್ಟು ಜೇನುತುಪ್ಪ ಸಂಸ್ಕರಿಸಬಹುದು. ರಫ್ತು ಗುಣಮಟ್ಟದ ಜೇನು ಸಂಸ್ಕರಣ ಘಟಕದಲ್ಲಿ 80 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ (ಕೋಲ್ಡ್ ಸ್ಟೋರೇಜ್) ಸೌಲಭ್ಯದ ವ್ಯವಸ್ಥೆಯಿದೆ. ಇಲ್ಲಿ ರೈತರಿಗೆ ತಾವು ಬೆಳೆದ ಹಣ್ಣು ತರಕಾರಿ ಇತ್ಯಾದಿ ಉತ್ಪನ್ನಗಳನ್ನು ಕಾಪಾಡುವ ಅಥವಾ ದಾಸ್ತಾನು ಮಾಡುವ ವ್ಯವಸ್ಥೆ ನೀಡಲಾಗುತ್ತಿದೆ.

ಗ್ರಾಮಜನ್ಯ ಆರಂಭದಿಂದ ಜೇನಿನ ಕೃಷಿ ಮತ್ತು ಬಳಕೆ ಪ್ರೋತ್ಸಾಹಿಸುವ ಉದ್ದೇಶ ಇಟ್ಟುಕೊಂಡಿದ್ದು, 2022ರ ವೇಳೆಗೆ ಸುಮಾರು 20ಕ್ಕೂ ಅಧಿಕ ಜೇನಿನ ಉಪ ಉತ್ಪನ್ನಗಳ ಸಂಶೋಧನೆ ನಡೆಸಿತ್ತು. ಪುತ್ತೂರಿನಲ್ಲಿ ನಡೆದ ಕೃಷಿ ಯಂತ್ರ ಮೇಳದಲ್ಲಿ ಇದರ ಪ್ರದರ್ಶನ ನಡೆಸಿತ್ತು. ಈ ವಿಚಾರವನ್ನು ಗಮನಿಸಿದ ಕೇಂದ್ರ ಸರ್ಕಾರದ ಎಸ್‌ಎಫ್‌ಎಸಿ (ಸ್ಮಾಲ್ ಫಾರ್ಮರ್ಸ್‌ ಅಗ್ರೀ ಕನ್ಸೋರ್ಟಮ್) ಅನ್ನುವ ಸಂಸ್ಥೆಯು ಇನ್ನೊಂದು ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಜೇನು ಮಂಡಳಿ (ರಾಷ್ಟ್ರೀಯ ತೋಟಗಾರಿಕಾ ಇಲಾಖೆಯ ಅಧೀನ ಸಂಸ್ಥೆ) ಗಮನಕ್ಕೆ ತಂದು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಗೆ ಒಂದು ಅತ್ಯಾಧುನಿಕ ಜೇನು ಸಂಸ್ಕರಣ ಘಟಕ ಸ್ಥಾಪಿಸಲು ಅನುಮತಿ ನೀಡಿ ಅದಕ್ಕಾಗಿ ₹2.22 ಕೋಟಿ ಅನುದಾನ ನೀಡಲಾಯಿತು. ಜೇನಿನಿಂದ ನೈಸರ್ಗಿಕ ಉತ್ಪನ್ನ:ಪೆಟ್ರೋಲಿಯಂ ಜೆಲ್ಲಿ ಬದಲಿಗೆ ಜೇನು ಮೇಣ ಬಳಸಿ ಸಂಸ್ಥೆ ತಯಾರಿಸುವ ಸಂಪೂರ್ಣ ನೈಸರ್ಗಿಕ ಸ್ಕಿನ್ ಕೇರ್ ಕ್ರೀಮ್ ಗ್ರಾಹಕರ ಜನಪ್ರಿಯತೆ ಗಳಿಸಿದ್ದು, ಇದಕ್ಕೆ ಉತ್ತಮ ಬೇಡಿಕೆ ಬರುತ್ತಿದೆ. ಹಾಗೆಯೇ ಇಲ್ಲಿರುವ ಸೌಲಭ್ಯ ಬಳಸಿಕೊಂಡು ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆಗೆ ಲಿಪ್ ಬಾಮ್, ಕಣ್ಣಿಗೆ ಹಚ್ಚುವ ನೈಸರ್ಗಿಕ ಕಾಡಿಗೆ ಇತ್ಯಾದಿ ತಯಾರಿಸಲಾಗುತ್ತದೆ.ನೋಂದಾಯಿತ ಸ್ವಾಯತ್ತ ಸಂಸ್ಥೆ: ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ, 2020ರಲ್ಲಿ ಕಾರ್ಪೊರೇಟ್ ಸಚಿವಾಲಯದ ಅಡಿಯಲ್ಲಿ ರಿಜಿಸ್ಟ್ರಾರ್ ಆಫ್ ಕಂಪನಿಸ್‌ನಲ್ಲಿ ನೋಂದಣಿಯಾದ ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಯಲ್ಲಿ ಭಾರತದ ಯಾವುದೇ ಭಾಗದ ಪ್ರಜೆಗಳು ಶೇರುದಾರರಾಗಬಹುದು. ಸಂಸ್ಥೆಯ ಲಾಭದಲ್ಲಿ ಪಾಲು ಹೊಂದಬಹುದಾಗಿದೆ. ಇಲ್ಲಿ ಕೃಷಿಕರೇ ಮಾಲೀಕರಾಗಿರುತ್ತಾರೆ, ರೈತರ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರಾಟ ರೈತ ಉತ್ಪಾದಕ ಕಂಪನಿಗಳ ಕೆಲಸವಾಗಿರುತ್ತದೆ ಎಂದು ಗ್ರಾಮಜನ್ಯ ರೈತ ಉತ್ಪಾಧಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ತಿಳಿಸಿದ್ದಾರೆ.

ತಾವು ರೈತರಿಂದ ಖರೀದಿಸುವ ಜೇನಿನ ಗುಣಮಟ್ಟ ಹಾಗೂ ಗ್ರಾಹಕರಿಗೆ ಮಾರಾಟ ಮಾಡುವ ಜೇನಿನ ಗುಣಮಟ್ಟದ ಖಾತರಿಯನ್ನು ಖಚಿತಪಡಿಸುವ ಸಲುವಾಗಿ ಸಂಸ್ಥೆ ಸುಮಾರು ₹40 ಲಕ್ಷ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯ ಸ್ಥಾಪಿಸಿದೆ. ಸುಮಾರು 8000 ಚದರ ಅಡಿ ವಿಸ್ತೀರ್ಣದ ವಿಶಾಲ ಕಟ್ಟಡದಲ್ಲಿ ತಲೆಯೆತ್ತಿ ನಿಲ್ಲುತ್ತಿರುವ ಈ ಆಧುನಿಕ ಜೇನು ಸಂಸ್ಕರಣಾ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ.

ಸಂಸ್ಥೆಯ ಇತರ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಿರಂಜನ್, ಸಂಸ್ಥೆ ಜೇನು ಕೃಷಿಗೆ ಮಹತ್ವ ನೀಡಿದ್ದು, ಇದರ ಜೊತೆಗೆ ಅಡಕೆಗೆ ಪರ್ಯಾಯ ಬೆಳೆಯಾಗಿ ಹಲಸು ಮತ್ತು ಬಿದಿರು ಕೃಷಿ ಉತ್ತೇಜಿಸುತ್ತಿದೆ. 2 ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ ಮಾಡುತ್ತಿದ್ದು, ಸುಮಾರು 20 ಟನ್‌ಗಳಷ್ಟು ಹಲಸು ಸಂಸ್ಕರಿಸಿದೆ. ಈ ವರ್ಷ ಇದನ್ನು ಇನ್ನೂ ಹೆಚ್ಚು ಮಾಡುವ ಉದ್ದೇಶ ಹೊಂದಿದ್ದು, ಸದಸ್ಯರ ಜಾಗಗಳಲ್ಲಿನ ಹಲಸಿನ ಮರಗಳ ವಿಶೇಷತೆಗಳಿಗೆ ಅನುಗುಣವಾಗಿ ಚಿಪ್ಸ್, ಹಣ್ಣು, ಪಲ್ಪ್, ಹಪ್ಪಳ ಇತ್ಯಾದಿ ಉಪಯೋಗಗಳಿಗೆ ತಕ್ಕಂತೆ ಗುರುತಿಸಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೆ ಡಿಜಿಟಲ್ ರೂಪ ನೀಡುವತ್ತ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಕೃಷಿಕರಿಗೆ ವರದಾನ ಆಗಲಿರುವ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಈ ಜೇನು ಸಂಸ್ಕರಣ ಘಟಕಕ್ಕೆ ಜಿಲ್ಲೆಯ ಮತ್ತು ರಾಜ್ಯದ ರೈತಾಪಿ ಸಮುದಾಯದವರು ಕೈಜೋಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಜೇನು, ಹಲಸು ಮತ್ತು ಬಿದಿರು ಕೃಷಿಯನ್ನು ಆರಂಭಿಸಿ ಸಂಸ್ಥೆಯ ಘಟಕದಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ಸಂಸ್ಕರಿಸಿಕೊಂಡು ಅಥವಾ ಸಂಸ್ಥೆಗೆ ವಿಕ್ರಯಿಸಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. -ನಿರಂಜನ್ ಪೋಳ್ಯ, ನಿರ್ದೇಶಕರು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!