ಹಣಕಾಸು ಸಂಸ್ಥೆಗಳು ಗುಣಮಟ್ಟದ ಸಿಸಿ ಕೆಮರಾ ಅಳವಡಿಸಲು ಎಸ್ಪಿಸೂಚನೆ

KannadaprabhaNewsNetwork | Published : Jan 22, 2025 12:34 AM

ಸಾರಾಂಶ

ರಾಜ್ಯದ ಹಲವು ಕಡೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬ್ಯಾಂಕ್‌ಗಳು, ಸಹಕಾರ ಸಂಘದ ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು ಹಾಗೂ ಆಭರಣ ಮಳಿಗೆಗಳ ಮಾಲೀಕರೊಂದಿಗೆ ಮಂಗಳವಾರ ಮಡಿಕೇರಿಯಲ್ಲಿಎಸ್ಪಿ ರಾಮರಾಜನ್ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಅಭರಣ ಮಳಿಗೆಗಳ ಒಳಗೆ ಮತ್ತು ಹೊರಗೆ ಸಿಸಿ ಟಿವಿಗಳನ್ನು ಅಳವಡಿಕೆ ಹಾಗೂ ಕಾರ್ಯನಿರ್ವಹಿಸುವ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು. ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ಮಳಿಗೆಗಳು ಹಗಲು ಮತ್ತು ರಾತ್ರಿಯ ದೃಶ್ಯವು ಸರಿಯಾಗಿ ಕಾಣುವಂತಹ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸೂಚನೆ ನೀಡಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬ್ಯಾಂಕ್‌ಗಳು, ಸಹಕಾರ ಸಂಘದ ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳ ವ್ಯವಸ್ಥಾಪಕರು ಹಾಗೂ ಆಭರಣ ಮಳಿಗೆಗಳ ಮಾಲೀಕರೊಂದಿಗೆ ಮಂಗಳವಾರ ಮಡಿಕೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳಲ್ಲಿ ಎಚ್ಚರಿಕೆಯ ಅಲರಾಂ ಗಳನ್ನು ಆಳವಡಿಸುವುದರಿಂದ ಸ್ಥಳೀಯರಿಗೆ ಅನಧಿಕೃತ ಪ್ರವೇಶದ ಬಗ್ಗೆ ಎಚ್ಚರಿಕೆ ನೀಡುತ್ತದೆ. ಬ್ಯಾಂಕ್, ಹಣಕಾಸು ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರ, ನಿಯಮಗಳ ಅನ್ವಯ ಕಾರ್ಯ ನಿರ್ವಹಿಸಬೇಕೆಂದರು.

ಎ.ಟಿ.ಎಂ.ಗೆ ಹಣ ಸಾಗಾಟದ ಸಂದರ್ಭ ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ಶಿಷ್ಟಾಚಾರ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು. ವ್ಯವಹಾರ ನಡೆಯುವ ಸಂದರ್ಭ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕುರಿತು ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಯವಾಣಿ 112 ಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.

ಹಣ ಸಾಗಾಟದ ವಾಹನಕ್ಕೆ ತಮ್ಮ ಪ್ರಧಾನ ಕಚೇರಿಗಳಿಂದ ನೀಡಲಾಗುವ ನಿಯಮಗಳ ಅನ್ವಯ ಅಗತ್ಯ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆಗಟ್ಟಲು ಹಗಲು ಮತ್ತು ರಾತ್ರಿ ಬೀಟ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಪರಾಧ ಕೃತ್ಯ ಎಸಗುವವರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಕೃತ್ಯ ಎಸಗಲು ಹಿಂದೇಟು ಹಾಕುವ ಸಾಧ್ಯತೆಗಳಿರುತ್ತದೆ. ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳು ಮತ್ತು ಆಭರಣ ಮಳಿಗೆಗಳಲ್ಲಿ ತುರ್ತು ಸಹಾಯವಾಣಿ-112 ಬೋರ್ಡ್ ಅಳವಡಿಸುವಂತೆ ಮನವಿ ಮಾಡಿದರು.

Share this article