ರಾಣಿಬೆನ್ನೂರು: ಪಾಕಿಸ್ತಾನ ವಿರುದ್ಧ ಬಳಕೆ ಮಾಡಿದ್ದ ಯುದ್ಧ ಟ್ಯಾಂಕರ್ ಮೆರವಣಿಗೆಗೆ ಆ. 15ರಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ನನ್ನ ಅನುದಾನದಲ್ಲಿ ₹15 ಲಕ್ಷ ನೀಡಿದ್ದು, ಅದನ್ನು ಇಲ್ಲಿಗೆ ತರಿಸಲು ತಗುಲುವ ಸಾರಿಗೆ ಹಣವನ್ನು ನಗರಸಭೆಯವರು ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ವಿಧಾನಸಭಾ ಕ್ಷೇತ್ರದ ಎಲ್ಲ ಮಾಜಿ ಶಾಸಕರಿಗೆ ಹಾಗೂ ಎಲ್ಲ ರಾಜಕೀಯ ಪಕ್ಷಗಳಿಗೂ ಆಹ್ವಾನ ನೀಡಿರುವೆ. ಮುಂದಿನ ದಿನಗಳಲ್ಲಿ ಯುದ್ಧದಲ್ಲಿ ಬಳಸಿದ ಮಿಗ್- 29 ಅಥವಾ ಜಾಗ್ವಾರ ಯುದ್ಧ ವಿಮಾನ ತರಿಸುವ ಚಿಂತನೆಯಿದೆ ಎಂದರು.
ತಪ್ಪುಗ್ರಹಿಕೆಗೆ ವಿಷಾದನಗರದ ತಹಸೀಲ್ದಾರ್ ಕಚೇರಿ ಮುಂಭಾಗದ ಜಾಗದ ಬಳಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ವಿಷಯವಾಗಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ಸದನದಲ್ಲಿ ನಾನು ಹೇಳಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸದನದಲ್ಲಿದ್ದಾಗ ಇಲ್ಲಿನ ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಫೋನ್ ಮಾಡಿ ಯುದ್ಧ ಟ್ಯಾಂಕರ್ ಮೇಲೆ ನನ್ನ ಭಾವಚಿತ್ರ ಹಾಕಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಆದರೆ ನಾನು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸದನದಲ್ಲಿ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗುತ್ತಿರುವ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದೆ. ಇದು ತಪ್ಪು ಗ್ರಹಿಕೆಯಿಂದ ಆಗಿದೆ ಎಂದು ಸ್ಪಷ್ಟಪಡಿಸಿದರು.