ಹಗರಿಬೊಮ್ಮನಹಳ್ಳಿ: ಪಟ್ಟಣದ ವಿಶ್ವಕರ್ಮ ಸಮುದಾಯ ಭನವದ ಮೇಲ್ಮಹಡಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಟ್ಟಡಕ್ಕೆ ₹೨೫ ಲಕ್ಷ ವಿಶೇಷ ಅನುದಾನ ಒದಗಿಸಲಾಗಿದೆ. ಹಾಗೆಯೇ ₹೫ ಲಕ್ಷ ಅನುದಾನ ಒದಗಿಸಿ ಚಾಲನೆ ನೀಡಲಾಗಿರುವ ಕಾಳಿಕಾದೇವಿಯ ದೇವಸ್ಥಾನ ನಿರ್ಮಾಣ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ದೇಗುಲಕ್ಕೆ ಹೆಚ್ಚಿನ ₹೫ ಲಕ್ಷ ಅನುದಾನ ಒದಗಿಸಲಾಗುತ್ತದೆ ಎಂದು ಶಾಸಕ ನೇಮರಾಜ್ ನಾಯ್ಕ ಭರವಸೆ ನೀಡಿದರು.
ವಿಶ್ವಕರ್ಮ ಸಮಾಜದ ಬಾಂಧವರು ನುಡಿದಂತೆ ನಡೆಯುವ, ಸರ್ವರ ಬೆನ್ನಿಗೆ ನಿಂತು ಆಶಿರ್ವದಿಸಿ ಸ್ವಂತ ದುಡಿಮೆ ಮೂಲಕ ಸ್ವಾಭಿಮಾನಿ ಸಮಾಜ ನಿರ್ಮಿಸುವ ಸಾತ್ವಿಕರು ಎಂದು ಬಣ್ಣಿಸಿದರು.
ಸಮಾಜದ ಅಧ್ಯಕ್ಷ ಸಿ.ಎಚ್.ಸಿದ್ಧರಾಜ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ೧೪ ವಟುಗಳ ಸಾಮೂಹಿಕ ಉಪನಯನ ನಡೆಸಲಾಯಿತು. ಒಂದು ಜೋಡಿ ಸಪ್ತಪದಿ ತುಳಿದು ನೂತನ ಬದುಕಿಗೆ ಪಾದಾರ್ಪಣೆ ಮಾಡಿದರು. ಮುಸಿಕಿನ ಕಲ್ಲಹಳ್ಳಿಯ ಬಸವರಾಜ ಪುರೋಹಿತರು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮೌನೇಶ್ವರ ಪಟಾಕಿಯನ್ನು, ಮೌನೇಶ್ವರ ಪರಶು, ಅಂತರಗಾಯಿ, ಪೂರ್ಣಕುಂಭ, ಗಂಧದ ಹಾರವನ್ನು ಹರಾಜು ನಡೆಸಲಾಯಿತು. ೨೪ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೊಪ್ಪಳದ ಬಿ.ಮಹೇಶ್ ಆಚಾರ್, ತಂಬ್ರಹಳ್ಳಿಯ ಬ್ರಹ್ಮಾಚಾರ್, ಬಿ.ಕಾಳಪ್ಪ, ಬಿ.ಮೌನೇಶ್ ಮತ್ತು ಕವಿತಾ ಡಾ.ಬಿ.ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.ಧರ್ಮಕರ್ತರಾದ ಎನ್.ಕೃಷ್ಣಮೂರ್ತಿ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಸಮಾಜದ ಗೌರವಾಧ್ಯಕ್ಷ ಪಿ.ಸಿದ್ರಾಮಪ್ಪಾಚಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಕೆ.ಗಂಗಣ್ಣ, ವೀರೇಶ್ ಕಿತ್ತನೂರ್, ಶ್ರೀಮತಿ ಪಿ.ವಿದ್ಯಾವತಿ, ಬಿ.ವೀರಭದ್ರಾಚಾರ್, ಡಾ.ಬಿ.ಸಿದ್ದಪ್ಪ, ಕಾಳಿಕಾ ದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಜಿ.ಬಡಿಗೇರ್ ಮತ್ತಿತರರಿದ್ದರು.