ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ಎಲ್ಲಾ ವಿಕಲಚೇತನರ ಸಂಘ ಸಂಸ್ಥೆಗಳ ವತಿಯಿಂದ ಬುಧವಾರ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಅಂಗವಿಕಲರಿಗೆ ವಾಹನದ ಸೌಲಭ್ಯ ಸೇರಿದಂತೆ ಕೆಲವೊಂದು ಸೌಲಭ್ಯಗಳನ್ನು ನೀಡುವಾಗ ಇಂತಿಷ್ಟು ಜನರಿಗೆ ನೀಡಬೇಕು ಎಂದು ನಿಗದಿ ಮಾಡುತ್ತದೆ. ಈ ರೀತಿ ಮಾಡದೆ ಜಿಲ್ಲೆಯಲ್ಲಿ ಎಷ್ಟು ಜನ ವಿಕಲಚೇತನರಿದ್ದಾರೋ ಅಷ್ಟೂ ಜನಕ್ಕೂ ಕೂಡ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಇದರ ಕುರಿತು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ವಿಶೇಷ ಚೇತನರಾದ ನಮ್ಮ ಜಿಲ್ಲೆಯವರೇ ಆಗಿರುವ ಗಿರೀಶ್ ಅವರು ಕ್ರೀಡೆಯಲ್ಲಿ ಸಾಧನೆಯ ಮಾಡಿರುವ ರೀತಿ, ಪ್ರತಿಯೊಬ್ಬರು ತಮ್ಮ ತಮ್ಮ ವೃತ್ತಿಯಲ್ಲಿ ಸಾಧನೆಯನ್ನು ಮಾಡಬೇಕು. ಯಂತ್ರಗಳನ್ನು ತೆಗೆದುಕೊಳ್ಳುವುದಕ್ಕೆ ಶಾಸಕರ ನಿಧಿಯಿಂದ ನಾನು ಹಣವನ್ನು ನೀಡುತ್ತೇನೆ. ಯಾವಾಗಲೂ ನಿಮ್ಮ ಬೆಂಬಲಕ್ಕೆ ಇರುತ್ತೇನೆ ಎಂದರು. ಎಂ ಕೃಷ್ಣ ಅಂಧರ ಮಕ್ಕಳ ಶಾಲೆಯ ಕಟ್ಟಡ ಶಿಥಿಲಗೊಂಡಿದೆ ಅದನ್ನು ಶಾಸಕರ ನಿಧಿಯಿಂದ ಹಾಗೂ ದಾನಿಗಳ ಸಹಾಯದಿಂದ ನೂತನ ಕಟ್ಟಡವನ್ನು ಮಾಡಲು ಶೀಘ್ರದಲ್ಲಿಯೇ ಜಿಲ್ಲಾಡಳಿತದೊಟ್ಟಿಗೆ ಸೇರಿ ಗುದ್ದಲಿ ಪೂಜೆಯನ್ನು ಮಾಡಿ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ವಿಕಲ ಚೇತನರ ಸಾಧನೆಯ ಮುಂದೆ ನಮ್ಮ ಸಾಧನೆ ಏನೇನು ಅಲ್ಲ, ನಿಜವಾದ ಸಾಧನೆ ಏನು ಎಂಬುದು ನನಗೆ ಗೊತ್ತಾಗಿದ್ದು, ವಿಕಲ ಚೇತನರ ಇಲಾಖೆಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ. ಆ ವೇಳೆಯಲ್ಲಿ ವಿಕಲಚೇತರಿಗೆ ಇರುವ ಸವಾಲುಗಳು, ಸಮಸ್ಯೆಗಳ ಕುರಿತು ನನಗೆ ಹೆಚ್ಚಿನ ಅನುಭವವಾಯಿತು ಎಂದು ತಿಳಿಸಿದರು. ವಿಕಲಚೇತನರ ಹಕ್ಕುಗಳನ್ನು ಸಂರಕ್ಷಣೆ ಮಾಡಲು ೨೦೧೬ರಲ್ಲಿ ಕಾಯ್ದೆ ಜಾರಿಗೆ ಬಂದಿದೆ. ನಮ್ಮ ಸಂವಿಧಾನದಲ್ಲಿ ಅವರು ಎಲ್ಲರೊಳಗೆ ಒಂದಾಗಿ ಅವರು ಕೂಡ ಜೀವನವನ್ನು ಮಾಡಬಹುದು. ಎಲ್ಲರಂತೆ ಸಹ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ. ಹಾಗಾಗಿ ಅವರ ಹಕ್ಕುಗಳನ್ನು ಕಾಯ್ದಿರಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.
ಪೋಷಕರು ಮಕ್ಕಳಿಗೆ ಯಾವುದೇ ನ್ಯೂನ್ಯತೆ ಇದ್ದರೂ ಅದನ್ನು ತಿರಸ್ಕರಿಸದೆ ಸ್ವೀಕರಿಸುವ ಮನೋಭಾವವನ್ನು ಹೊಂದಬೇಕು. ಅದಕ್ಕೆ ನಾನು ಏನು ಸಹಕಾರ ಬೆಂಬಲ ನೀಡಬೇಕು ಎಂಬುದನ್ನು ಆಲೋಚಿಸಬೇಕು. ಅವರ ಸ್ವಂತ ಕಾಲಿನ ಮೇಲೆ ಅವರು ನಿಲ್ಲುವುದಕ್ಕೆ ಅವಕಾಶ ಮಾಡಿಕೊಡಬೇಕು. ಆ ಮಗುವಿಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರುವ ಪೋಷಕರಿಗೆ ಧನ್ಯವಾದಗಳನ್ನು ಹೇಳಬೇಕು. ಅಂಗವಿಕಲರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಿಸ್ಸಂಕೋಚವಾಗಿ ಕೇಳಿ ಪಡೆಯಬೇಕು ಎಂದು ತಿಳಿಸಿದರು.
ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಭಾರತಿ ಜಿ. ಗಣವಾರಿ ಅವರು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಧರಣಿ ಕುಮಾರ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.