ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೊರವಲಯದ ಹೇಮಗಿರಿ - ಜಲಸೂರು ಬೈಪಾಸ್ ರಸ್ತೆಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಲೋಕರಕ್ಷಕಿ ತಾಯಿ ಶ್ರೀ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ಹೋಮ- ಹವನಗಳು ಶ್ರದ್ಧಾ ಭಕ್ತಿಯಿಂದ ನಡೆದವು. ಸಾವಿರಾರು ಭಕ್ತಾದಿಗಳು ಹಾಗೂ ಮುತ್ತೈದೆಯರು ಅಲಂಕೃತಗೊಂಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಧ್ಯಮಿ ಕೆ.ಎಚ್.ಆರ್ ಚಂದ್ರಶೇಖರ್ ಮಾತನಾಡಿ, ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಶ್ರೀ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿ ಧನ್ಯರಾಗಿದ್ದಾರೆ. ಇಂದು 2ನೇ ಆಷಾಢ ಶುಕ್ರವಾರದ ಅಂಗವಾಗಿ ದೇವಾಲಯವನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿದೆ ಎಂದು ಹೇಳಿದರು.ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ರವಿಶಾಸ್ತ್ರಿ ಅವರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ದೇಗುಲದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಕೆ.ಆರ್.ನಾಗರಾಜಶೆಟ್ಟಿ, ಉಪಾಧ್ಯಕ್ಷ ಕೆ.ಆರ್.ಮಹೇಶ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ್ ಸುರೇಶ್, ಖಜಾಂಚಿ ಮಧುಸೂಧನ್, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ, ಕಬಾಬ್ ನಾರಾಯಣಪ್ಪ, ಹೊನ್ನಾವರ ಚಂದ್ರಶೇಖರ್, ಕೆ.ಎಚ್. ಗೋಪಾಲ್ ಸೇರಿದಂತೆ ಸಾವಿರಾರು ಭಕ್ತರು ಅನ್ನ ಪ್ರಸಾದ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು.