ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಶಿವಜ್ಯೋತಿ ಪಣ ಗಾಣಿಗರ ಸಂಘ ಕಳೆದ ಶತಮಾನದಿಂದ ವಿಶೇಷ ದಿನವಾದ ವ್ಯಾಸಪೂರ್ಣಿಮೆ ದಿನದಂದು ಚನ್ನಕೇಶವ ಸ್ವಾಮಿಗೆ ಅಭಿಷೇಕ ವಿಶೇಷ ಪೂಜಾ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಗಾಣಿಗರ ಜನಾಂಗದ ಮಹಿಳೆಯರು ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಹಿರಿಯ ಅರ್ಚಕ ಶ್ರೀನಿವಾಸ್ ಭಟ್ ಮಾತನಾಡಿ, ವ್ಯಾಸಪೂರ್ಣಿಮೆ ವಿಶೇಷ ದಿನವಾಗಿದ್ದು ವ್ಯಾಸ ಮಹರ್ಷಿಗಳು ಈ ದಿನದಂದು ಹಿಂದೂಗಳ ಪವಿತ್ರ ಗ್ರಂಥ ಮಹಾಭಾರತ ಲೋಕಾರ್ಪಣೆ ಮಾಡಿದ ದಿನವಾಗಿದೆ. ಅಂತಹ ಮಹಾನ್ ಗುರುಗಳನ್ನು ನೆನೆಯುವ ಈ ದಿನ ಪವಿತ್ರವಾಗಿದ್ದು, ಗಾಣಿಗರ ಜನಾಂಗದ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಇಂದಿಗೂ ವ್ಯಾಸಪೂರ್ಣಿಮೆ ಮಾಡಲಾಗುತ್ತಿದೆ ಎಂದರು. ಗಾಣಿಗರ ಸಂಘದ ಕಾರ್ಯದರ್ಶಿ ಎನ್ ಅನಂತು ಮಾತನಾಡಿ ಕಳೆದ ಶತಮಾನದಿಂದ ವ್ಯಾಸ ಪೂರ್ಣಿಮೆಯನ್ನು ನಮ್ಮ ಜನಾಂಗದವರು ಆಚರಿಸಿಕೊಂಡು ಬರುತ್ತುತ್ತಿದ್ದು ಹಿರಿಯರ ಮಾರ್ಗದರ್ಶನದಂತೆ ಗುರುಪೂರ್ಣಿಮೆಯನ್ನು ಆಚರಿಸಿ ಗುರುವಂದನೆ ಸಲ್ಲಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ನರಸಿಂಹಪ್ರಿಯಭಟ್, ಗಾಣಿಗರ ಸಂಘದ ಅಧ್ಯಕ್ಷ ಬಿ ಎಲ್ ನಾಗರಾಜ್, ಪುರಸಭೆ ಸದಸ್ಯ ಪ್ರಭಾಕರ್, ಸಂಘದ ಜಗದೀಶ್, ಚಂದ್ರಶೇಖರ್, ನಂಜುಂಡ, ಜೀವನ್ , ಕೇಶವ, ಯಶವಂತ್ ಇತರರು ಇದ್ದರು. ಇದೇ ವೇಳೆ ಬಂದಂತ ಭಕ್ತರಿಗೆ ಅನ್ನದಾಸೋಹ ನಡೆಯಿತು.