ಪ್ರತಿಯೊಬ್ಬರು ಆಧ್ಯಾತ್ಮಿಕದಿಂದ ಬದುಕಿನಲ್ಲಿ ಸುಖ, ನೆಮ್ಮದಿ ಪಡೆಯಲು ಸಾಧ್ಯವಿದೆ.
ಧಾರ್ಮಿಕ ಕಾರ್ಯಗಳಲ್ಲಿ ಮಾಧ್ಯಮಗಳ ಪಾತ್ರ ವಿಷಯದ ಕುರಿತು ಉಪನ್ಯಾಸ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪ್ರತಿಯೊಬ್ಬರು ಆಧ್ಯಾತ್ಮಿಕದಿಂದ ಬದುಕಿನಲ್ಲಿ ಸುಖ, ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದು ಕುಕನೂರಿನ ಕೆಎಲ್ಇ ಮಹಾವಿದ್ಯಾಲಯದ ಉಪನ್ಯಾಸಕ ಶರಣಪ್ಪ ಉಮಚಗಿ ಹೇಳಿದರು.ತಾಲೂಕಿನ ದಮ್ಮೂರು ಗ್ರಾಮದ ಇಟಗಿ ಭೀಮಾಂಬಿಕಾದೇವಿ ದೇವಿ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡ ೩೬೬ನೇ ಮಾಸಿಕ ಶಿವಾನುಭವಗೋಷ್ಠಿ ನಿಮಿತ್ತ ಧಾರ್ಮಿಕ ಕಾರ್ಯಗಳಲ್ಲಿ ಮಾಧ್ಯಮಗಳ ಪಾತ್ರ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಪುರಾಣ, ಪ್ರವಚನಗಳಿಂದ ಜೀವನದಲ್ಲಿ ನೆಮ್ಮದಿ ಪಡೆಯುವ ಜತೆಗೆ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.
ಬಾಹ್ಯ ಆಡಂಬರಕ್ಕಿಂತ ಅಂತರಂಗದ ಪರಿಶುದ್ಧತೆಯಿಂದ ದೇವರನ್ನು ಒಳಮನದಿಂದ ಕಾಣುವ ಸಾತ್ವಿಕತೆಯನ್ನು ಶರಣರು ಹೊಂದಿದ್ದರು. ಅಧಿಕಾರ, ಸಂಪತ್ತು ಶಾಶ್ವತವಲ್ಲ ಎಂದು ಭಾವಿಸಿದ ಶರಣರು ನುಡಿದಂತೆ ನಡೆದವರು. ಭೌತಿಕ ಜೀವನದಲ್ಲಿದ್ದರೂ ಸಂಬಂಧಗಳೊಂದಿಗೆ ನಿರ್ಲಿಪ್ತ ಮನೋಭಾವ ತಳದಿದ್ದ ಶರಣ ಸಂಸ್ಕೃತಿಯ ನಾಡಿನಲ್ಲಿ ಇಂದು ಕಾಯಕ, ದಾಸೋಹ, ಸಮಾನತೆಗಳು ನೆಲೆ ಕಳೆದುಕೊಳ್ಳುವ ಆತಂಕ ಮೂಡಿರುವುದು ವಿಷಾದನೀಯ ಎಂದು ಹೇಳಿದರು.
ಪತ್ರಕರ್ತ ಮಲ್ಲು ಮಾಟರಂಗಿ, ಸಮಾಜ ಸೇವಕ ಶಿವು ರಾಜೂರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ಗೆ ಯುವ ಜನಾಂಗ ಮಾರು ಹೋಗಿ ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯವಾದ ಜೀವನವನ್ನು ಯುವಕರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಎಂದರು.
ದಮ್ಮೂರು ಇಟಗಿ ಧರ್ಮರಮಠದ ಹನುಮಂತಪ್ಪಜ್ಜನವರು ಸಾನಿಧ್ಯ ವಹಿಸಿದ್ದರು.
ಅತಿಥಿಗಳಾಗಿ ಶಿವಾನುಭವ ಸಮಿತಿ ಅಧ್ಯಕ್ಷ ಎಸ್.ಕೆ. ದಾನಕೈ, ಕಸಾಪ ಮಾಜಿ ಅಧ್ಯಕ್ಷ ಶಿವಮೂರ್ತಿ ಇಟಗಿ, ವೇದಮೂರ್ತಿ ಶರಣಯ್ಯ ಹಿರೇಮಠ, ಸ.ಶರಣಪ್ಪ ಪಾಟೀಲ, ದೇವಪ್ಪ ಗುರಿಕಾರ, ವೀರಪ್ಪ ರ್ಯಾವಣಕಿ, ಡಿ.ಮೌನೇಶ ಬಡಿಗೇರ, ನೀಲಪ್ಪ ರೊಡ್ಡರ್, ಕಳಕಪ್ಪ ಹಡಪದ, ದುರಗಪ್ಪ ಹರಿಜನ, ಶರಣಗೌಡ ದ್ಯಾಮನಗೌಡ್ರ, ಭೀಮಣ್ಣ ಜರಕುಂಟಿ, ಬಸವರಾಜ ಮರಗಪ್ಪನವರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.