ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತದೆ. ಅವರು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ. ಮಾನಸಿಕ ಹಾಗೂ ಆರೋಗ್ಯಯುತವಾಗಿರಲು ಕ್ರೀಡೆ ಅವಶ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಹೇಳಿದರು.
ಇತ್ತೀಚೆಗೆ ವಿದ್ಯಾರ್ಥಿ ಯುವ ಮಿತ್ರರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಶಿಸ್ತು ಮತ್ತು ಒಗ್ಗಟ್ಟು ಅವಶ್ಯ. ಜತೆಗೆ ದೇಶಾಭಿಮಾನ, ಭಾಷಾಭಿಮಾನವೂ ಅವಶ್ಯ. ಈಚೆಗೆ ಜರುಗಿದ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶ 71ನೇ ಸ್ಥಾನ ಪಡೆಯುವ ಮುಲಕ ಅತ್ಯಂತ ಹಿಂದೆ ಇದ್ದೇವೆ. ಪಿಎಂ ಮೋದಿಜಿ ಖೇಲೋ ಇಂಡಿಯಾ ಯೋಜನೆ ಮೂಲಕ ಯುವಕರಿಗೆ ಕ್ರೀಡೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಿರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳದಿದ್ದರೆ ಓದಿನಲ್ಲಿಯೂ ಮುಂದೆ ಬರಲು ಸಾಧ್ಯವಾಗುವುದಿಲ್ಲ. ನಮ್ಮ ದೇಶದಲ್ಲಿ ಕ್ರೀಡೆಗೆ ಆಸಕ್ತಿ ಕಡಿಮೆಯಾಗುತ್ತದೆ. ಖೇಲ್ ರತ್ನದಲ್ಲಿ ಆಯ್ಕೆಯಾದವರಿಗೆ ಪ್ರತಿವರ್ಷ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಮೂಲಕ 5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಎರಡು ದಿನಗಳ ಕಾಲ ಜರುಗಲಿರುವ ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಬೇಕು. ನಿರ್ಣಾಯಕರು ಉತ್ತಮವಾಗಿ ನಿರ್ಣಯ ಕೊಡುವ ಮೂಲಕ ನೈಜ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಅತ್ಯುತ್ತಮವಾದ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿ ತರಬೇಕು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಮುಖಂಡರಾದ ಆನಂದಗೌಡ ಪಾಟೀಲ, ಕೊಟ್ರೇಶ ಅಂಗಡಿ, ದೇವು ಹಡಪದ, ಬಸವರಾಜ ಬಿಳಿಮಗ್ಗದ, ಎ.ವಿ. ಹಳ್ಳಿಕೇರಿ, ವಿ.ಎಂ. ಪಾಟೀಲ, ನಾಗರಾಜ ಹಳ್ಳಿಕೇರಿ, ಗಂಗಾಧರ ಅಣ್ಣಿಗೇರಿ, ಪವಿತ್ರಾ ಕಲ್ಲಕುಟಗರ್, ಪುಷ್ಪಾ ಉಕ್ಕಲಿ, ಮಾರುತಿ ನಾಗರಳ್ಳಿ, ಮಹೇಶ ನಾಗರಳ್ಳಿ, ಮಂಜುನಾಥ ಮುಧೋಳ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಫಕ್ಕೀರಸಾಬ್ ಕಲಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಾ ಗುಜ್ಜರಿ ನಿರೂಪಿಸಿ, ಆನಂದರಡ್ಡಿ ಮ್ಯಾಗೇರಿ ವಂದಿಸಿದರು.