ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗವು ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಆಧುನಿಕ ಜೀವನ ಶೈಲಿಯಲ್ಲಿ ದೈಹಿಕ ಶಿಕ್ಷಣದ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಮಾನಸಿಕ ನೆಮ್ಮದಿ ಮತ್ತು ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಕೇವಲ ಸಮಯ ವ್ಯರ್ಥ ಮಾಡುವಂತಹ ಮೊಬೈಲ್ ಗೇಮ್, ಮೊಬೈಲ್ ನೊಂದಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರ ಮಾನಸಿಕ ಸ್ಥಿತಿ, ಬೌದ್ಧಿಕ ಮಟ್ಟ, ಶೈಕ್ಷಣಿಕ ವಲಯದಲ್ಲಿ ಅವರ ಸಾಧನೆ, ಆಸಕ್ತಿಯ ಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಇಂದಿನ ವಿದ್ಯಾರ್ಥಿಗಳು ಸಮುದಾಯದಲ್ಲಿ ಬೆರೆಯುವ ಮತ್ತು ಸಹಪಾಠಿಗಳೊಂದಿಗೆ ಕಷ್ಟ ಸುಖವನ್ನು ಹಂಚಿಕೊಳ್ಳುವ ಗುಣಗಳು ಕ್ಷೀಣಿಸುತ್ತಿವೆ. ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಮೂಲಕ ದೈಹಿಕ ಕಸರತ್ತು ಮಾಡುವುದರ ಮೂಲಕ ಯಾವುದೇ ರೋಗ ರುಜನಗಳು ಬಾರದಂತೆ, ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಇದೇ ವೇಳೆ ಮೈಸೂರು ವಿಶ್ವವಿದ್ಯಾನಿಲಯವನ್ನು ಕಬಡ್ಡಿ ತಂಡದಲ್ಲಿ ಪ್ರತಿನಿಧಿಸಿ, ದಕ್ಷಿಣ ಭಾರತ ಅಂತರ ವಿವಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಾದ ಎಂ.ಟಿ. ಪ್ರಣತಿ, ಧನುಶ್ರೀ, ಎಸ್. ಕಲ್ಪನಾ, ತ್ರಿಶಾಂಕ ಅವರಿಗೆ ಕಾಲೇಜು ವತಿಯಿಂದ ತಲಾ 3 ಸಾವಿರ ರು.ಗಳ ಚೆಕ್ ವಿತರಿಸಲಾಯಿತು.
ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್. ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್. ಭಾಸ್ಕರ್, ಐಕ್ಯೂಎಸಿ ಸಂಚಾಲಕಿ ಡಾ. ಪ್ರಿಯಾ ಉತ್ತಯ್ಯ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್, ಕ್ರೀಡಾ ಸಮಿತಿಯ ಸದಸ್ಯರು, ವಿದ್ಯಾರ್ಥಿನಿಯರು ಇದ್ದರು.