ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಮಂಜುನಾಥ್

KannadaprabhaNewsNetwork | Published : Apr 24, 2025 12:04 AM

ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದು ಠಾಣಾಧಿಕಾರಿ ಮಂಜುನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ 25ನೇ ವರ್ಷದ ಬೇಸಿಗೆ ಶಿಬಿರದಲ್ಲಿ ಮಂಗಳವಾರ ಪಾಲ್ಗೊಂಡು ಶಿಬಿರಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಿರಿಯ ವಯಸ್ಸಿನಿಂದಲೇ ಮಕ್ಕಳು ಕ್ರೀಡೆಗೆ ಆದ್ಯತೆ ನೀಡಬೇಕು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಇಲ್ಲದಿದ್ದಲ್ಲಿ ವ್ಯಕ್ತಿ ಪರಿಪೂರ್ಣತೆ ಹೊಂದುವುದಿಲ್ಲ. ದೇಹ ಸದೃಢವಾಗಿದ್ದರೆ ಮನಸು ಸದೃಢ ವಾಗಿರುತ್ತದೆ ಎಂದರು. ಕೊಡಗಿನಲ್ಲಿ ಹಾಕಿ ಕ್ರೀಡೆ ಜನಪ್ರಿಯ ನಾಲ್ಕು ನಾಡು ವ್ಯಾಪ್ತಿಯ ಎಲ್ಲರ ಮನೆಗಳಲ್ಲಿ ಹಾಕಿ ಮನೆ ಮಾಡಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದರು, ಕ್ರೀಡೆಯಿಂದ ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯ . ಕ್ರೀಡೆ ಇಲ್ಲದಿದ್ದರೆ ಸೋಮಾರಿತನ ಬೆಳೆಯುತ್ತದೆ. ನಿತ್ಯ ಜೀವನದಲ್ಲಿ ಉಲ್ಲಾಸ ಮೂಡಬೇಕಿದ್ದರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ ಎಂದರು.

ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದು ಅಪರಾಧ. ನಿಗದಿತ ವಯಸ್ಸಿನ ಬಳಿಕ ಚಾಲನಾ ಪರವಾನಗಿ ಪಡೆದು ವಾಹನ ಚಾಲನೆ ಮಾಡುವುದು ಅಗತ್ಯ. ಅದಕ್ಕಿಂತ ಮುನ್ನ ವಾಹನ ಚಾಲನೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಪೊಲೀಸ್ ಇಲಾಖೆ ಹಲವು ಬಾರಿ ಸುರಕ್ಷಿತ ವಾಹನ ಚಾಲನೆ ಅರಿವು ಮೂಡಿಸುವ ಕೆಲಸ ಮಾಡಿದೆ. ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮೂಡಿಸಲು ಗುರುಗಳು ಶ್ರಮಿಸುತ್ತಾರೆ. ಗುರುಗಳ ಮಾತಿಗೆ ಬೆಲೆ ಕೊಡಬೇಕು. ತಪ್ಪು ತಿದ್ದಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುಗಳ ಮಹತ್ವವನ್ನು ಅರಿತು ಅವರಿಗೆ ಗೌರವ ನೀಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಅಧ್ಯಕ್ಷ ಕಾಂಡಂಡ ಜೋಯಪ್ಪ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಸಲಹೆ ಸೂಚನೆಗಳನ್ನು

ನೀಡಿದರು. ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಕಾರ್ಯದರ್ಶಿ, ಮುಖ್ಯ ತರಬೇತುದಾರಾಗಿರುವ, ಮಾಜಿ ಸೈನಿಕ ಕೇಟೋಳಿರ ಡಾಲಿ ಅಚ್ಚಪ್ಪ, ಖಜಾಂಚಿ ಮಾಚೆಟ್ಟಿರ ಕುಸು ಕುಶಾಲಪ್ಪ, ನಿರ್ದೇಶಕರಾದ ಮುಕ್ಕಾಟಿರ ವಿನಯ್, ಕುಂಚೆಟ್ಟಿರ ಸುಧಿ, ಕೊಂಡಿರ ಗಣೇಶ್, ದುಗ್ಗಳ ಸದಾನಂದ ತರಬೇತುದಾರರಾದ ಅರೆಯಡ ಗಣೇಶ್, ಕುಂಡ್ಯೋಳಂಡ ಕವಿತಾ ಮುತ್ತಣ್ಣ, ಬಿದ್ದಾಟಂಡ ಮಮತ ಚಿಣ್ಣಪ್ಪ, ಪೋಷಕರಾದ ಅರೆಯಡ ರತ್ನಾಪೆಮ್ಮಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.