ಕನ್ನಡಪ್ರಭ ವಾರ್ತೆ ಕುಶಾಲನಗರ ಕ್ರೀಡೆಗಳು ಶಿಸ್ತು ನಾಯಕತ್ವ ಮತ್ತು ಧೈರ್ಯದೊಂದಿಗೆ ಯುವ ಮನಸುಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಗುಣಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು. ಕೊಡಿಗೆಯ ಕೊಡಗು ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾದ ಅಖಿಲ ಭಾರತ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ, ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸೈನಿಕ ಶಾಲೆಯ ಆವರಣದ ಮರಿಯಪ್ಪ ಕೆಂಪಯ್ಯ ಫುಟ್ಬಾಲ್, ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು 13 ಸೈನಿಕ ಶಾಲೆಗಳ 21 ತಂಡಗಳು ಪಾಲ್ಗೊಂಡಿದ್ದು, ವಯೋಮಿತಿ ಆಧಾರದಲ್ಲಿ ಮೂರು ತಂಡಗಳು ಪಂದ್ಯಾವಳಿಯಲ್ಲಿ ಪ್ರದರ್ಶನ ನೀಡಲಿವೆ. ಕೊಡಗು ಸೈನಿಕ ಶಾಲೆ ಗುಂಪು ಮಟ್ಟದ ಪಂದ್ಯಗಳಲ್ಲಿ ಜಯ ಗಳಿಸಿ ಮೂರು ವಿಭಾಗಗಳಲ್ಲಿ ಪ್ರತಿನಿಧಿಸುತ್ತಿದೆ.
ಜೂ.11ರ ತನಕ ಪಂದ್ಯಾವಳಿ ನಡೆಯಲಿದ್ದು, ಅಂದು ಸಂಜೆ ಸಮಾರೋಪ ನಡೆಯಲಿದೆ. ಕೊಡಗು ಜಿಲ್ಲಾ ಪೊಲೀಸ್ ಪೊಲೀಸ್ ಅಧಿಕಾರಿ ಬಿಂದುಮಣಿ ಆರ್.ಎನ್. ಪಾಲ್ಗೊಂಡಿದ್ದರು. ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಅಮರ್ಜಿತ್ ಸಿಂಗ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮ್ಮದ್ ಶಾಜಿ, ದಿವ್ಯ ಸಿಂಗ್, ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಮತ್ತು ವಿವಿಧ ತಂಡಗಳ ಮೇಲ್ವಿಚಾರಕರು, ಪಂದ್ಯದ ಅಧಿಕಾರಿಗಳು, ವಿದ್ಯಾರ್ಥಿಗಳು, ಸೈನಿಕ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಕೂಡಿಗೆ ಮೊರಾರ್ಜಿ ಶಾಲೆ ಮತ್ತು ಅತ್ತೂರು ಜ್ಞಾನಗಂಗಾ ಶಾಲೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.