ಕನ್ನಡಪ್ರಭ ವಾರ್ತೆ ಹಾಸನ
ಕ್ರೀಡೆಯಲ್ಲಿ ಕೇವಲ ಶಕ್ತಿ ಇದ್ದರೇ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಜೊತೆ ಜೊತೆಯಲ್ಲಿ ಯುಕ್ತಿಯೂ ಇರಬೇಕು. ಎದುರಾಳಿಯ ದೌರ್ಬಲ್ಯವನ್ನು ಅರಿತು ಜವಾಬ್ದಾರಿಯಿಂದ ಆಟವಾಡಿದರೆ ಮಾತ್ರ ಯಶಸ್ಸು ಗಳಿಸಬಹುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕಿವಿಮಾತು ಹೇಳಿದರು.ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ವಯೋಮಿತಿ ೧೪ರಿಂದ ೧೭ ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಹಾಗೂ ಮೈಸೂರು ವಿಭಾಗ ಮಟ್ಟದ ಥ್ರೋಬಾಲ್ ಪಂದ್ಯಾವಳಿ-೨೦೨೩-೨೪ನ್ನು ಥ್ರೋಬಾಲ್ ಎಸೆಯುವುದರ ಮೂಲಕ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು, ಒಬ್ಬ ಮನುಷ್ಯನ ಸ್ವಾರ್ಥಕ್ಕೆ ವಿಧ್ಯೆ ಎಷ್ಟು ಸಹಕಾರಿಯು ದೈಹಿಕ ಚಟುವಟಿಕೆಗಳು ಕೂಡ ಅಷ್ಟೆ ಮುಖ್ಯವಾಗಿದೆ. ಪ್ರಸ್ತುತ ನಮ್ಮ ದೇಶದ ದಿಕ್ಕು ಕ್ರೀಡೆಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚಿಗೆ ನಡೆದಂತಹ ಕಾಮನ್ವೆಲ್ತ್ ಕ್ರೀಡೆ ಇರಬಹುದು, ಒಲಂಪಿಕ್ ಇರಬಹುದು, ಎಲ್ಲಾ ಕಡೆ ನಮ್ಮ ಕ್ರೀಡಾಪಟುಗಳು ತಮ್ಮ ಛಾಪು ಮೂಡಿಸಿ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಫೈನಲ್ ಸೋಲು ಅನುಭವಿಸಿರಬಹುದು. ಆದರೇ ಮೊದಲಿನಿಂದಲು ಉತ್ತಮ ಆಟವನ್ನಾಡಿ ಫೈನಲ್ವರೆಗೂ ಯಶಸ್ವಿಯಾಗಿ ಹೋಗಿರುವುದಕ್ಕೆ ಎಲ್ಲರೂ ಹೆಮ್ಮೆಪಡಬೇಕಾಗಿದೆ ಎಂದರು.
ಒಲಂಪಿಕ್ನಲ್ಲೂ ನೋಡುವುದಾದರೇ ನಮ್ಮಲ್ಲಿ ಎಲ್ಲರೂ ಶೂಟರ್ಸ್ ಇದ್ದಾರೆ. ಹಾಕಿಯಲ್ಲಿ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಎಲ್ಲಾ ಕ್ರೀಡೆಯಲ್ಲೂ ನಮ್ಮವರು ಮುಂಚೂಣಿಯಲ್ಲಿದ್ದಾರೆ. ಯಾವುದೇ ಕ್ರೀಡೆ ಆಗಿರಲಿ ಉತ್ತಮ ಆಟವಾಡಲು ಮುಂದಾಗಿ. ಹಾಗೇ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.ರಾಜ್ಯ ಮಟ್ಟದ ಬಾಲಕರ ಮತ್ತು ಬಾಲಕಿಯರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಆಟದಲ್ಲಿ ಬರೀ ಶಕ್ತಿಯೇ ಪ್ರಯೋಜನಕ್ಕೆ ಬರುವುದಿಲ್ಲ. ಎದುರಾಳಿಯ ಆಟವನ್ನು ವೀಕ್ಷಿಸಿ ಯಾವ ಸಂದರ್ಭದಲ್ಲಿ ಯಾವ ಕಡೇ ಬಾಲು ಹಾಕಿದರೇ ಉತ್ತಮ ಎಂಬುದನ್ನು ಅರಿತು ಆಟವಾಡುವುದು ಯುಕ್ತಿ ಎಂದು ಸಲಹೆ ನೀಡಿದರು. ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಎಂದು ಇದೆ ವೇಳೆ ಶುಭ ಹಾರೈಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಅವರು ಮಾತನಾಡಿ, ಮಕ್ಕಳು ಚುರುಕಾಗಲು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಪ್ರೋತ್ಸಾಹಿಸಬೇಕು. ಪ್ರಸ್ತುತದಲ್ಲಿ ಮಕ್ಕಳು ಮೊಬೈಲ್ ಕಡೆ ಹೆಚ್ಚಿನ ಗಮನ ನೀಡಿ ಪಠ್ಯ ಮತ್ತು ಕ್ರೀಡೆಗಳ ಕಡೆ ಗಮನ ಕಡಿಮೆಯಾಗಿದೆ. ಎಲ್ಲರೂ ಕೇವಲ ಅಂಕಗಳ ಕಡೆ ಗಮನ ಕೊಟ್ಟರೇ ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಒಂದು ದೇಶ ಬಲಿಷ್ಠ ಆಗಬೇಕಾದರೇ ಕ್ರೀಡೆಯೂ ಕೂಡ ಕಾರಣವಾಗಿದೆ. ಯಾವುದೇ ಕ್ರೀಡೆಯಾಗಿರಲಿ ಉತ್ತಮ ತರಬೇತಿ ಪಡೆದು ಶ್ರದ್ಧೆಯಿಂದ ಭಾಗವಹಿಸಿದರೇ ಜಯ ಖಂಡಿತ ಸಿಗುತ್ತದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಬಸವರಾಜು, ಮಹೇಶ್, ನಿಂಗಯ್ಯ, ಚಕ್ರಪಾಣಿ, ವೇದಣ್ಣ, ಪಾಲಾಕ್ಷ, ವೆಂಕಟೇಶ್, ಗೋವಿಂದೇಗೌಡ, ಅಂತೋಣಿ, ರಘು, ಇತರರು ಉಪಸ್ಥಿತರಿದ್ದರು.