ಕರ್ಕೇಶ್ವರ ಗ್ರಾಮದಲ್ಲಿ ದಸರಾ ಕ್ರೀಡಾಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಯುವಜನರು ಸತತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಸ್ಥಿರತೆ ಹಾಗೂ ಸದೃಢತೆ ದೊರೆಯಲು ಸಾಧ್ಯವಿದೆ ಎಂದು ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ ಹೇಳಿದರು.
ಕರ್ಕೇಶ್ವರ ಗ್ರಾಮದಲ್ಲಿ ಗೆಳೆಯರ ಬಳಗ ಕರ್ಕೇಶ್ವರ ಕೈಮರದ ಸೇವಾ ಸಮಿತಿ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಜನರು ಸದಾ ಒತ್ತಡದ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿರುತ್ತಾರೆ. ಅವರಿಗೆ ದುಡಿಮೆಯೇ ಮುಖ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಜನರನ್ನು ಒಂದುಗೂಡಿಸಿ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡುವುದರಿಂದ ಅವರ ಮನಸ್ಸು ಉಲ್ಲಾಸಿತವಾಗುತ್ತದೆ ಎಂದರು.
ಕರ್ಕೇಶ್ವರ ಗ್ರಾಮದಲ್ಲಿ ಈ ನಿಟ್ಟಿನಲ್ಲಿ ಪ್ರತೀ ವರ್ಷ ದಸರಾ ಸಂದರ್ಭದಲ್ಲಿ ವಿಶೇಷ ಕ್ರೀಡಾಕೂಟ ಆಯೋಜಿಸಿ ಗ್ರಾಮಸ್ಥರಿಗೆ ವಿಶೇಷ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಮಾತ್ರ ಇಂತಹ ಉತ್ತಮ ಮನಃಸ್ಥಿತಿ ಕಾಣಲು ಸಾಧ್ಯವಿದೆ ಎಂದರು.ಗೆಳೆಯರ ಬಳಗ ಕರ್ಕೇಶ್ವರ ಕೈಮರದ ಸೇವಾಸಮಿತಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಕರ್ಕೇಶ್ವರ ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಪರಸ್ಪರ, ಸ್ನೇಹ, ಸೌಹಾರ್ದತೆಯಿಂದ ದಸರಾ ಕ್ರೀಡಾಕೂಟ ಆಯೋಜಿಸುತ್ತಿರುವುದು ಸಂತಸದ ವಿಚಾರ. ಗ್ರಾಮಸ್ಥರು ಸದಾ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ ಎಂದರು.
ಸಮಿತಿ ಕಾರ್ಯದರ್ಶಿ ಎಸ್. ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ದಿನಕರ್, ಸದಸ್ಯ ಅಚ್ಚುತ, ದೈಹಿಕ ಶಿಕ್ಷಕ ಸುಬ್ಬಯ್ಯ, ವೀರಮಣಿ ಮತ್ತಿತರರು ಹಾಜರಿದ್ದರು.-೨೮ಬಿಹೆಚ್ಆರ್ ೨:
ಬಾಳೆಹೊನ್ನೂರು ಸಮೀಪದ ಕರ್ಕೇಶ್ವರ ಗ್ರಾಮದಲ್ಲಿ ಗೆಳೆಯರ ಬಳಗ ಕರ್ಕೇಶ್ವರ ಕೈಮರದ ಸೇವಾ ಸಮಿತಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ನಾಗರಾಜ್ ಮಾತನಾಡಿದರು. ರಾಜೇಶ್ ಕೇಶವತ್ತಿ, ಪ್ರಕಾಶ್, ದಿನಕರ್, ಅಚ್ಚುತ, ವೀರಮಣಿ ಇದ್ದರು.