ಹೊಸಕೋಟೆ: ನಗರದಲ್ಲಿ ನಡೆದ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಪನ್ನಗೊಂಡಿತು.
ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಹಾಗೂ ದ್ರೌಪದಮ್ಮ ಕರಗ ಮಹೋತ್ಸವವನ್ನು ಒಟ್ಟಿಗೆ ಸೇರಿ ಆಚರಿಸುವ ಹಬ್ಬವಾಗಿದ್ದು, ೧೯೦೪ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ರಥೋತ್ಸವ ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಕಳೆದ ಭಾರಿ ಕೊಟ್ಟ ಮಾತಿನಂತೆ ನಮ್ಮ ಕುಟುಂಬದಿಂದಲೆ ಸುಮಾರು 2.5 ಕೋಟಿ ವೆಚ್ಚದಲ್ಲಿ ಹೊಸ ರಥವನ್ನು ಕೊಡುಗೆ ನೀಡಲಾಗಿದೆ. ಹೊಸ ರಥದಲ್ಲಿ ಬ್ರಹ್ಮರಥೋತ್ಸವ ಆಚರಣೆ ಮಾಡುತ್ತಿರುವುದು ಹೊಸ ಮೆರುಗನ್ನು ತಂದಿದೆ ಎಂದರು.
ಕನ್ವಿನರ್ ಕೇಶವಮೂರ್ತಿ ಮಾತನಾಡಿ, ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯ ದಕ್ಷಿಣ ಪಿನಾಕಿನಿ ನದಿ ತಟದಲ್ಲಿರುವ ದೇವಾಲಯವಾಗಿದ್ದು, ಮೈಸೂರು ಮಹಾರಾಜರ ಕಾಲದಿಂದ ರಥೋತ್ಸವ ಆಚರಣೆ ಮಾಡುತ್ತಿದ್ದೇವೆ. ರಥೋತ್ಸವ ವರ್ಷದಿಂದ ವರ್ಷಕ್ಕೆ ಸಾಕಷ್ಟು ವೈಭವ ಪಡೆದುಕೊಳ್ಳುತ್ತಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ರಥೋತ್ಸವ ಯಶಸ್ವಿಗೆ ಅವಿರತ ಶ್ರಮಿಸುತ್ತಿದ್ದಾರೆ. 122 ವರ್ಷಗಳ ಬಳಿಕ ಹೊಸ ತೇರನ್ನು ಬೆಂಡಿಗಾನಹಳ್ಳಿ ಬಿ.ಎನ್.ಬಚ್ಚೇಗೌಡರ ಕುಟುಂಬದಿಂದ ಕೊಡುಗೆ ನೀಡಿದ್ದು ಹೊಸ ರಥದೊಂದಿಗೆ ರಥೋತ್ಸವ ಕಳೆಗಟ್ಟಿದೆ ಎಂದರು.ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುವಕರು, ಹಿರಿಯರು, ಮಹಿಳೆಯರು ಬಾಳೆ ಹಣ್ಣನ್ನು ತೇರಿಗೆಸೆದು ಹರಕೆ ತೀರಿಸಿಕೊಂಡರು. ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿದಂತ ಹಲವು ರೀತಿಯ ಕಲಾ ತಂಡಗಳು ವಿವಿಧ ತಮಟೆ ವಾದ್ಯಗಳು ಭಾಗವಹಿಸಿದ್ದವು.
ಫೋಟೋ : 1 ಹೆಚ್ಎಸ್ಕೆ 1 ಮತ್ತು 2
2: ಹೊಸಕೋಟೆ ಅವಿಮುಕ್ತೇಶ್ವರ ರಥೋತ್ಸವ ಆಚರಣೆ ಸಮಿತಿ ವತಿಯಿಂದ ಕನ್ವಿನರ್ ಕೇಶವಮೂರ್ತಿಯವರು ಶಾಸಕ ಶರತ್ ಬಚ್ಚೇಗೌಡರಿಗೆ ಗೌರವ ಸಮರ್ಪಿಸಿದರು.