ಆನೆಕೊಂಡದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ಮಹೋತ್ಸವ

KannadaprabhaNewsNetwork | Published : Aug 27, 2024 1:43 AM

ಸಾರಾಂಶ

"ರಾಮ ರಾಮ ಎಂದು ನುಡಿದೀತಲೆ, ನರಲೋಕದ ಜನಕೆ ಆನೆ ತಣ್ಣೀರ ಉಗ್ಗೀತಲೆ, ಮುತೈದರ ಭೂತಾಯಿ ಉಡಿ ತುಂಬಿತಲೆ, ನರಲೋಕದ ಜನಕೆ ದೃಷ್ಟಿ ಹುಚ್ಚಾದೀತಲೇ ಪರಾಕ್‌... " ಇಲ್ಲಿನ ಇತಿಹಾಸ ಪ್ರಸಿದ್ಧ ಆನೆಕೊಂಡ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣೀಕ ನುಡಿಯಿದು.

ಕನ್ನಡಪ್ರಭ ವಾರ್ತೆ ದಾವಣಗೆರೆ

"ರಾಮ ರಾಮ ಎಂದು ನುಡಿದೀತಲೆ, ನರಲೋಕದ ಜನಕೆ ಆನೆ ತಣ್ಣೀರ ಉಗ್ಗೀತಲೆ, ಮುತೈದರ ಭೂತಾಯಿ ಉಡಿ ತುಂಬಿತಲೆ, ನರಲೋಕದ ಜನಕೆ ದೃಷ್ಟಿ ಹುಚ್ಚಾದೀತಲೇ ಪರಾಕ್‌... "

ಇಲ್ಲಿನ ಇತಿಹಾಸ ಪ್ರಸಿದ್ಧ ಆನೆಕೊಂಡ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ಣೀಕ ನುಡಿಯಿದು.

ಆನೆಕೊಂಡದಲ್ಲಿ ಶ್ರಾವಣ ಮಾಸದ ಕಡೇ ಸೋಮವಾರ ನೀಲಾನಹಳ್ಳಿ ಶ್ರೀ ಆಂಜನೇಯ ಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಸೇರಿದಂತೆ 7 ಹಳ್ಳಿಗಳ ದೇವರ ಮೆರವಣಿಗೆ ನಂತರ ಕಾರ್ಣೀಕ ನಡೆಯಿತು.

ಶ್ರಾವಣದ ಕಡೇ ಸೋಮವಾರದಂದು ಅನಾದಿಯಿಂದ ಶ್ರೀ ಬಸವೇಶ್ವರ ಕಾರ್ಣೀಕ ನಡೆಯುತ್ತಿದೆ. ಭವಿಷ್ಯದ ಕುರುಹು, ಸಂಕೇತ, ಸೂಕ್ಷ್ಮಗಳನ್ನು ನೀಡುವ ಕಾರ್ಣೀಕವನ್ನು ಆಲಿಸಲು, ಸ್ವಾಮಿ ದರ್ಶನಕ್ಕಾಗಿ ಈ ಬಾರಿಯೂ ಸಹಸ್ರಾರು ಭಕ್ತರು ಆಗಮಿಸಿದ್ದರು. ಪದ್ಧತಿಯಂತೆ ಆಚರಣೆಗಳ ಜೊತೆಗೆ ನೀಲಾನಹಳ್ಳಿಯ ಅರ್ಚಕ, ದಾಸಯ್ಯ ಸುತ್ತಲಿನ ಹಳ್ಳಿಗಳ ದೇವರುಗಳ ಪಲ್ಲಕ್ಕಿ ಸಮ್ಮುಖ ಕಾರ್ಣೀಕ ನುಡಿದರು.

ನರಲೋಕದ ಜನಕೆ ಆನೆ ತಣ್ಣೀರ ಉಗ್ಗೀತಲೆ ಎಂದರೆ ಉತ್ತಮ ಮಳೆಯಾಗಲಿದೆ, ಮುತ್ತೈದೆಯರ ಭೂತಾಯಿ ಉಡಿ ತುಂಬಿತಲೇ ಅಂದರೆ ಮಹಿಳೆಯರಿಗೂ ಶುಭವಾಗಲಿದೆ, ನರಲೋಕದ ಜನರೆ ದೃಷ್ಟಿ ಹುಚ್ಚಾದೀತಲೆ ಅಂದರೆ ಈಗಿನ ಕಾಲದ ಸೋಷಿಯಲ್ ಮೀಡಿಯಾಗಳ ಅತಿಯಾದ ಬಳಕೆ, ಅದರಿಂದ ಆಗುವ ಕೆಡುಕು, ಅಪಾಯಗಳನ್ನು ಸೂಚ್ಯವಾಗಿ ಹೇಳಿದಂತಿದೆ ಈ ಸಲದ ಕಾರ್ಣೀಕ ಎಂದು ಸ್ಥಳದಲ್ಲಿದ್ದ ಹಿರಿಯರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು.

ಇಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಇತರರು ದೇವಸ್ಥಾನಕ್ಕ ಭೇಟಿ ನೀಡಿ, ಸ್ವಾಮಿ ದರ್ಶನ ಪಡೆದರು. ದೇವಸ್ಥಾನ ಸಮಿತಿ ಕನ್ವೀನರ್ ಎಂ.ರೇವಣಸಿದ್ದಯ್ಯ, ಧರ್ಮದರ್ಶಿಗಳ ಸಮಿತಿ, ಗ್ರಾಮಸ್ಥರು, ಭಕ್ತರು ಇದ್ದರು.

- - - -26ಕೆಡಿವಿ6, 7ಜಿಃ:

ದಾವಣಗೆರೆಯ ಆನೆಕೊಂಡ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಕಾರ್ಣೀಕ ನುಡಿಯುತ್ತಿರುವ ದಾಸಯ್ಯ.

Share this article