- ಗಡ್ಲವೇರ ತಿಪ್ಪೇಶ್ ಸಂಗಡಿಗರಿಂದ ಪುರವಂತಿಕೆ ಒಡಪು, ಹರಕೆ ತೀರಿಸಿದ ಭಕ್ತರು
ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಮಾ.10ರಂದು ಬೆಳಗಿನಜಾವ ವಿವಿಧ ವಾದ್ಯಮೇಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ರಥದ ಮೇಲೆ ಕಳಸವನ್ನುಟ್ಟು ವಿವಿಧ ಬಣ್ಣಗಳ ಬಾವುಟಗಳನ್ನು ಕಟ್ಟಿ, ಬಣ್ಣ ಬಣ್ಣದ ಹೂಗಳಿಂದ ರಥವನ್ನು ಅಲಂಕರಿಸಲಾಗಿತ್ತು. ರಥದ ಸುತ್ತ ಉತ್ಸವ ಮೂರ್ತಿಗಳ ಹೊತ್ತ ಫಲ್ಲಕ್ಕಿಗಳು ಮೂರು ಬಾರಿ ಪ್ರದಕ್ಷಿಣೆ ಮಾಡಿದ ನಂತರ ಶ್ರೀ ಬಸವೇಶ್ವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಾಳೆದಲೆ ಮೇಲೆ ಅನ್ನದ ಎಡೆಹಾಕಿದ ಭಕ್ತರು ಕಾಯಿ ಹೊಡೆದ, ಜೈಕಾರ ಹಾಕುತ್ತಾ ರಥವನ್ನು ಎಳೆದು ಭಕ್ತಿ ಮೆರೆದರು.ಗಡ್ಲವೇರ ತಿಪ್ಪೇಶ್ ಸಂಗಡಿಗರು ಪುರವಂತಿಕೆ ಒಡಪುಗಳನ್ನು ಹೇಳಿದರು. ರಥಕ್ಕೆ ಒಣಕೊಬ್ಬರಿಯನ್ನು ದಹಿಸುತ್ತಾ ಭಕ್ತರು ಮಂಡಕ್ಕಿ, ಮೆಣಸಿನಕಾಳು ಎಸೆದು ಭಕ್ತಿ ತೋರಿದರು.
ರಾತ್ರಿ ಶ್ರೀ ಬಸವೇಶ್ವರ-ನೀಲಮ್ಮ ದೇವರಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸೋಮವಾರ ಸಂಜೆ 4 ಗಂಟೆಗೆ ಎತ್ತುಗಳ ಮೆರವಣಿಗೆ, ಯುವಕರು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಬಂದು ಓಕಳಿ ಆಚರಿಸಿದರು. ಶ್ರೀ ಬಸವೇಶ್ವರ ಸ್ವಾಮಿ ಅಡ್ಡಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಗ್ರಾಮ ಮುಖಂಡರು, ಯುವಜನರು, ಮಹಿಳೆಯರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಹೂವುಗಳ ದಾನ:ಗ್ರಾಮದಲ್ಲಿ 2 ದಿನಗಳ ಕಾಲ ನಡೆದ ಉಚ್ಚಾಯ (ಸಣ್ಣತೇರು) ಮಹಾರಥೋತ್ಸವ ಮತ್ತು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಗ್ರಾಮದ ಸೂರಪ್ಳಾರ ದಿ. ಸೂರಪ್ಪ, ಸಿದ್ದಮ್ಮ ಮತ್ತು ಮಕ್ಕಳು ವಿವಿಧ ಬಗೆಯ ಹೂವುಗಳ ದಾನ ಮಾಡಿದ್ದರು.
- - --10ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸೋಮವಾರ ನಡೆಯಿತು.