ಶ್ರೀ ಕೃಷ್ಣನ ಜೀವನ, ಬೋಧನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತ: ಶಂಕರ ಶೇಟ್

KannadaprabhaNewsNetwork |  
Published : Sep 09, 2026, 01:30 AM IST
ಫೋಟೊ:೦೮ಕೆಪಿಸೊರಬ-೦೧ : ಸೊರಬ ಪಟ್ಟಣದ ನಿಜಗುಣ ರೆಸಿಡೆನ್ಸಿ ಹಾಲ್‌ನಲ್ಲಿ ಶೈನಿಂಗ್ ಸ್ಟಾರ್ ಕಿಡ್ಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಕೃಷ್ಣವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಣ್ಣರು. | Kannada Prabha

ಸಾರಾಂಶ

ಶ್ರೀ ಕೃಷ್ಣನು ಸತ್ಯ, ಧರ್ಮ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕನಾಗಿದ್ದಾನೆ. ಅವನ ಜೀವನ ಹಾಗೂ ಭಗವದ್ಗೀತೆಯ ಸಂದೇಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.

ಕನ್ನಡಪ್ರಭ ವಾರ್ತೆ ಸೊರಬ

ಶ್ರೀ ಕೃಷ್ಣನು ಸತ್ಯ, ಧರ್ಮ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕನಾಗಿದ್ದಾನೆ. ಅವನ ಜೀವನ ಹಾಗೂ ಭಗವದ್ಗೀತೆಯ ಸಂದೇಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕೃತಿ, ಪುರಾಣದ ಕಥೆಗಳು, ತಾಯಿ ಮತ್ತು ಮಗನ ನಡುವಿನ ಪ್ರೀತಿಯನ್ನು ಪ್ರಚುರಪಡಿಸಲು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಾಡಿನಲ್ಲಿ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಒಂದೊಂದು ತರವಾಗಿ ಗೋಕುಲಾಷ್ಟಮಿಯನ್ನು ಆಚರಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜಸೇವಕ ಶಂಕರ ಶೇಟ್ ಹೇಳಿದರು.

ಪಟ್ಟಣದ ನಿಜಗುಣ ರೆಸಿಡೆನ್ಸಿ ಹಾಲ್‌ನಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್‌ನ ಶೈನಿಂಗ್ ಸ್ಟಾರ್ ಕಿಡ್ಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಯಶೋಧಾ ಕೃಷ್ಣ ಸ್ಪರ್ಧೆ ಮತ್ತು ಮುದ್ದು ರಾಧೆ, ಮುದ್ದು ಕೃಷ್ಣ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಮಕ್ಕಳ ವೇಷಭೂಷಣವನ್ನು ನೋಡಿದಾಗ ಈ ಆವರಣವೇ ಪುಟ್ಟ ಗೋಕುಲದಂತೆ ಕಂಗೊಳಿಸುತ್ತಿದೆ. ತಾಯಿ ಯಶೋಧೆಯ ವಾತ್ಸಲ್ಯ ಮತ್ತು ಬಾಲಕೃಷ್ಣನ ಕೀಟಲೆ, ಮುಗ್ಧತೆ ಎಂದಿಗೂ ಮರೆಯಲಾಗದ ಸುಂದರ ಕಲ್ಪನೆಯಾಗಿದ್ದು, ನಮ್ಮ ಕಣ್ಣ ಮುಂದೆ ಅಂತಹ ಹಲವಾರು ಯಶೋಧೆ, ಮುದ್ದು ಕೃಷ್ಣ ನೆರೆದಿದ್ದು ನೋಡುಗರ ಕಣ್ಣಿಗೆ ಹಬ್ಬವಾಗಿದೆ ಎಂದರು.

ಕೃಷ್ಣನ ಬೋಧನೆಗಳು ಕೇವಲ ಒಂದು ಯುಗಕ್ಕೆ ಸೀಮಿತವಾಗಿರದೇ ಸಾರ್ವಕಾಲಿಕ ಮಹತ್ವವನ್ನು ಹೊಂದಿವೆ. ಭಗವದ್ಗೀತೆಯಲ್ಲಿ ಆತ ನೀಡಿದ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಸಂದೇಶವು ಫಲದ ಅಪೇಕ್ಷೆಯಿಲ್ಲದೆ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನಮಗೆ ಕಲ್ಪಿಸಿಕೊಡುತ್ತದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶಕ್ಕಾಗಿ ಕೃಷ್ಣ ತೋರಿದ ಹಾದಿ ಸದಾ ಪ್ರೇರಣಾದಾಯಿ. ಕೃಷ್ಣನ ಲೀಲೆಗಳು ಭಕ್ತಿ ಮತ್ತು ಪ್ರೀತಿಯ ಸಂಕೇತವಾದರೆ, ಆತನ ತತ್ವಶಾಸ್ತ್ರವು ನೈತಿಕ ಜೀವನಕ್ಕೆ ದಾರಿದೀಪವಾಗಿದೆ. ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ, ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಎದುರಿಸುವುದನ್ನು ಕೃಷ್ಣನ ಜೀವನ ನಮಗೆ ಕಲಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳು ಕೃಷ್ಣ, ರಾಧೆ ವೇಷದಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಪಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗುಡಿಗಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮಹೇಶ ಖಾರ್ವಿ, ತೆರಿಗೆ ಸಲಹೆಗಾರ ಎಸ್. ಮಂಜುನಾಥ, ಡ್ಯಾನ್ಸ್ ಮಾಸ್ಟರ್ ಸ್ಟೀವನ್, ಡ್ಯಾನ್ಸ್ ಕೊರಿಯೋಗ್ರಾಫರ್ ಯುವಕೀರ್ತಿ, ಗಾಯಕಿ ರೂಪಾ ಮಧುಕೇಶ್ವರ, ಸಂಪನ್ಮೂಲ ವ್ಯಕ್ತಿ ವೀಣಾ ಟೇವಕರ್, ಮುಖ್ಯೋಪಾಧ್ಯಾಯಿನಿ ಕಲ್ಪನಾ, ಶಿಕ್ಷಕರಾದ ರಾಘವೇಂದ್ರ, ಶ್ವೇತಾ, ಪ್ರೀತಿ, ರಶ್ಮಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದವು ಆಳವಾದ ಒಂದು ವಿಶೇಷ ಸಂಸ್ಕೃತಿ
ಹಾಸನ ಮತ್ತು ಬೇಲೂರು ಚತುಷ್ಪಥ ಕಾಮಗಾರಿಗೆ ಅನುದಾನ ಮಂಜೂರು