ಮಂತ್ರಾಲಯ ಮಠಕ್ಕೆ ಮರಳಿ ಶ್ರೀಮೂಲರಾಮದೇವರನ್ನು ತಂದವರು ಶ್ರೀರಘುನಂದನ ತೀರ್ಥರು: ಶ್ರೀಸುಬುಧೇಂದ್ರ ಸ್ವಾಮೀಜಿ

KannadaprabhaNewsNetwork |  
Published : Nov 24, 2024, 01:47 AM IST
23ಎಚ್‌ಪಿಟಿ2- ಹಂಪಿಯ ಶ್ರೀರಘುನಂದನ ತೀರ್ಥರ ಮಠದಲ್ಲಿ ಶ್ರೀರಘುನಂದನ ತೀರ್ಥರ ಮೂಲಬೃಂದಾವನಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ವೈದಿಕ ವಿದ್ಯೆಗಳನ್ನು ಹೇಳಿಕೊಟ್ಟವರು ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮದ ಹಿರಿಯರು.

ಹೊಸಪೇಟೆ: ಪರಂಪರಾಗತವಾಗಿ ಮಂತ್ರಾಲಯ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀಮೂಲರಾಮದೇವರನ್ನು ಮರಳಿ ಶ್ರೀಮಠಕ್ಕೆ ತಂದುಕೊಟ್ಟವರು ಶ್ರೀರಘುನಂದನ ತೀರ್ಥರು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಹಂಪಿ ಶ್ರೀರಘುನಂದನ ತೀರ್ಥರ ಮಠದಲ್ಲಿ ಶ್ರೀರಘುನಂದನ ತೀರ್ಥರ ಮೂಲಬೃಂದಾವನ ಸನ್ನಿಧಿಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಶ್ರೀರಘುನಂದನ ತೀರ್ಥರ ಮಧ್ಯಾರಾಧನೆ ಪ್ರಯುಕ್ತ ಅಪರೋಕ್ಷ ಜ್ಞಾನಿಗಳು ರಚಿಸಿದ ಶ್ರೀಮೂಲರಾಮದೇವರ ಕೀರ್ತನೆಗಳ ಶತಕಂಠ ಗಾನ ಕಾರ್ಯಕ್ರಮದ ಘನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಹರಿದಾಸರು ಯತಿಗಳು ಓಡಾಡಿದ ಪುಣ್ಯ ಭೂಮಿ ಮಾತ್ರವಲ್ಲದೆ ಇದು ಹನುಮನ ನಾಡಾಗಿದೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ವೈದಿಕ ವಿದ್ಯೆಗಳನ್ನು ಹೇಳಿಕೊಟ್ಟವರು ಶ್ರೀರಾಘವೇಂದ್ರ ಗುರುಗಳ ಪೂರ್ವಾಶ್ರಮದ ಹಿರಿಯರು. ಇಂತಹ ಪರಿಸರದಲ್ಲಿ ಶ್ರೀಮೂಲರಾಮದೇವರ ಶತಕಂಠ ಗಾನ ಕಾರ್ಯಕ್ರಮ ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ನಡೆಸಲಾಗಿದೆ ಎಂದರು.

ಹಂಪಿಯಲ್ಲಿ ಶ್ರೀರಘುನಂದನ ತೀರ್ಥರ ಗುರುಗಳಾದ ಶ್ರೀಸೂರೇಂದ್ರ ತೀರ್ಥರ ಬೃಂದಾವನ, ಮಠವೂ ಕಳೆದ ಕೆಲ ವರ್ಷಗಳ ಹಿಂದೆ ಉತ್ಖನನ ಸಂದರ್ಭದಲ್ಲಿ ಪತ್ತೆಯಾಗಿದೆ. ಇಲ್ಲಿಯ ನೀತಿ, ನಿಯಮಗಳಂತೆ ಮುಂದಿನ ದಿನಗಳಲ್ಲಿ ಜೀರ್ಣೋದ್ಧಾರ ಪೂಜಾ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

ಶ್ರೀರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಮೂಲ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ರಜತ, ರೇಷ್ಮೆ ಹಾಗೂ ವಸ್ತ್ರಾಲಂಕಾರ ನೆರವೇರಿಸಲಾಯಿತು. ಬಳಿಕ ವಿವಿಧ ಹೂವುಗಳಿಂದ ಮೂಲ ಬೃಂದಾವನಕ್ಕೆ ಅಲಂಕಾರ ಮಾಡಲಾಯಿತು.

ಶ್ರೀಗಳು ಶ್ರೀಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ನೆರೆದಿದ್ದ ಭಕ್ತರಿಗೆ ದರ್ಶನ ಮಾಡಿಸಿದರು. ಬಳಿಕ ನೈವೇದ್ಯ, ಹಸ್ತೋದಕ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಿದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ‌ಶತಕಂಠ ಗಾನ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀಮಠದ ಪಂಡಿತರಾದ ವೇಣುಗೋಪಾಲ ಆಚಾರ್ಯ, ಕನಕಾಚಲಾಚಾರ್ಯ, ಶ್ರೀಮಠದ ಅನಂತ ಪುರಾಣಿಕ್, ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಠಾಧಿಕಾರಿ ಪವನಾಚಾರ್ಯ, ವ್ಯವಸ್ಥಾಪಕರಾದ ಸುಮಂತ್ ಕುಲಕರ್ಣಿ, ಟೀಕಾಚಾರ್ಯ, ಕೃಷ್ಣಮೂರ್ತಿ, ಪ್ರಮುಖರಾದ ಭೀಮಸೇನಾಚಾರ್ಯ, ಶಿರೆಕೊಳ್ಳ ಗುರುರಾಜ್, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!