ದಾವಣಗೆರೆಯಲ್ಲಿ ಶ್ರೀರಾಮ ನವಮಿ ಆಚರಣೆಯ ಸಂಭ್ರಮ

KannadaprabhaNewsNetwork | Published : Apr 7, 2025 12:32 AM

ದಾವಣಗೆರೆಯಾದ್ಯಂತ ಎಲ್ಲೆಡೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರೀರಾಮ ನವಮಿಯನ್ನು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ । ಸಾಂಸ್ಕೃತಿಕ ಕಾರ್‍ಯಕ್ರಮ । ಭಕ್ತರಿಗೆ ಕೋಸಂಬರಿ, ಪಾನಕ ಹಂಚಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಾದ್ಯಂತ ಎಲ್ಲೆಡೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರೀರಾಮ ನವಮಿಯನ್ನು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಇಲ್ಲಿನ ಪಿ.ಜೆ.ಬಡಾವಣೆಯ ರಾಮ ಮಂದಿರ, ಜಯದೇವ ವೃತ್ತದಲ್ಲಿರುವ ಶ್ರೀ ರಾಮ ದೇವಸ್ಥಾನ, ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನ, ಪಿ.ಬಿ.ರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನ ಸೇರಿದಂತೆ ಹಲವೆಡೆ ಭಾನುವಾರ ಮುಂಜಾನೆಯಿಂದ ಪೂಜೆ ಪುನಸ್ಕಾರಗಳು ನಡೆದವು. ದೇವರಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿತ್ತು.

ಪುರಾತನ ಶ್ರೀರಾಮ ದೇವಸ್ಥಾನ:

ಪಿ.ಜೆ.ಬಡಾವಣೆಯಲ್ಲಿರುವ ಸುಮಾರು 79 ವರ್ಷಗಳ ಇತಿಹಾಸ ಇರುವ ಶ್ರೀ ಖಮಿತ್ಕರ್ ಈಶ್ವರಪ್ಪನವರ ಶ್ರೀ ರಾಮ ಮಂದಿರದಲ್ಲಿ ರಾಮ ನವಮಿ ಅಂಗವಾಗಿ ಬೆಳಿಗ್ಗೆ 7.15 ರಿಂದ ಶ್ರೀ ರಾಮಮೂಲ ಮೂರ್ತಿಗೆ ಶ್ರೀ ಸೂಕ್ತ, ಪುರುಷ ಸೂಕ್ತ ಮತ್ತು ರುದ್ರಮಂತ್ರಗಳಿಂದ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ರಾಮ ಜನನದ ತೊಟ್ಟಿಲು ಕಾರ್ಯಕ್ರಮ ನಡೆಯಿತು.

ನಂತರ ಬಂದಂತ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಸಂಜೆ ಶುಭ ಮತ್ತು ಸಂಗಡಿಗರಿಂದ ವೀಣಾ ವಾದನ ಕಾರ್ಯಕ್ರಮ, ಭಾವಸಾರ ಕ್ಷತ್ರಿಯ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಗೀತೆಗಳ ಕಾರ್ಯಕ್ರಮ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ್ ರಿಂದ ಸ್ಮಾರ್ಟ್ ಆರ್ಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ವಹಿವಾಟುದಾರರಾದ ರಾಜಾರಾಮ್ ಖಮಿತ್ಕರ್ ತಿಳಿಸಿದರು.

ದೇವಸ್ಥಾನದಲ್ಲಿ ಸೇವಾ ಕರ್ತರಾಗಿ ಮೀರಾಬಾಯಿ, ಭರತೇಶ ಖಮಿತ್ಕರ್, ಜಯರಾಮ್ ಖಮಿತ್ಕರ್, ವಿನಾಯಕ ಖಮಿತ್ಕರ್, ಕಿಶನ್, ನಾಗದೀಪ, ಅನಂತರಾಮ್, ಎಂ.ಜಿ.ಶ್ರೀಕಾಂತ್, ಅನಂತಭಟ್, ಗೋವಿಂದರಾಜ್, ಶಂಕರ್ ಭಟ್, ಶ್ರೀಪಾದ ಭಟ್ ಸೇರಿದಂತೆ ಸಮಿತಿ ಸದಸ್ಯರು ಇದ್ದರು.

ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನ, ವಿನೋಬನಗರ, ಹಳೇಪೇಟೆಯ ಶಿವಾಜಿನಗರ, ನಿಟ್ಟುವಳ್ಳಿ, ಎಸ್.ನಿಜಲಿಂಗಪ್ಪ ಬಡಾವಣೆ, ಆಂಜನೇಯ ಬಡಾವಣೆ, ಎಸ್.ಎಸ್.ಆಸ್ಪತ್ರೆ ರಸ್ತೆ, ಜಯನಗರ, ಶಾಮನೂರು ವಿವಿಧೆಡೆ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ರಾಮ ಮೂರ್ತಿ, ಭಾವಚಿತ್ರ ಇಟ್ಟು ಪೂಜಿಸಿ, ಭಕ್ತಾದಿಗಳಿಗೆ ಕೋಸಂಬರಿ, ಪಾನಕ ವಿತರಿಸಿದರು.

ಭಕ್ತರು ತಮ್ಮ ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಅಭಿಷೇಕ, ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದ ದೃಶ್ಯ ಕಂಡು ಬಂದಿತು. ಮಧ್ಯಾಹ್ನ ಬಿಸಿಲು ಜಾಸ್ತಿ ಇದ್ದ ಕಾರಣ ದೇವಾಲಯಗಳಲ್ಲಿ ದರ್ಶನಕ್ಕೆ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಅನಿಸಿದರೂ ಸಹಾ ಸಂಜೆ, ರಾತ್ರಿ ವೇಳೆಗೆ ಭಕ್ತರ ಸಂಖ್ಯೆ ಜಾಸ್ತಿಯಾಯಿತು. ದೇವಸ್ಥಾನಗಳಲ್ಲಿ ಭಕ್ತರಿಗೆ ಪಂಚಾಮೃತ, ಕೋಸಂಬರಿ, ಪಾನಕ ನೀಡಿದರು. ಕೆಲವೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಇನ್ನು ಜಯದೇವ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಅನೇಕ ಸಂಘ ಸಂಸ್ಥೆಯವರು, ಭಕ್ತರು ಶ್ರೀ ರಾಮನವಮಿ ಅಂಗವಾಗಿ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ವಿತರಿಸಿದರು.