ಶ್ರೀ ಸತ್ಯಸಾಯಿ ಬಾಬಾರವರ ಪರಿಕಲ್ಪನೆಯಂತೆ ಸೇವಾ ಮನೋಭಾವ ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ಪಡೆದಾಗ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಾಣಲು ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಶ್ರೀ ಸತ್ಯಸಾಯಿ ಬಾಬಾರವರ ಪರಿಕಲ್ಪನೆಯಂತೆ ಸೇವಾ ಮನೋಭಾವ ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ಪಡೆದಾಗ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಾಣಲು ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಸೇವಾ ಕಾರ್ಯಗಳೊಂದಿಗೆ ಎರಡು ದಿನಗಳ ಕಾಲ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸತ್ಯಸಾಯಿ ಬಾಬಾರವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದ್ದು, ಅವರ ದಿವ್ಯ ಶಕ್ತಿ ಸಮಾಜದಲ್ಲಿ ಸದಾ ಕಾಲ ಉಳಿದುಕೊಂಡಿದೆ. ವಿದ್ಯಾಲಯ, ಭೋಜನಾಲಯ, ದೇವಾಲಯ, ವೈದ್ಯಾಲಯ ಹೀಗೆ ಹಲವು ಕ್ಷೇತ್ರಗಳಲ್ಲಿ ಬಾಬಾರವರು ಕಂಡ ಪರಿಕಲ್ಪನೆ ಇಂದಿಗೂ ಸಾಕಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಮಾದರಿಯಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಡಾ. ಡಿ. ಪ್ರಭಾಕರ ಬೀರಯ್ಯನವರು ಅವರ ತಂದೆ ಬೀರಯ್ಯನವರು ಸ್ಥಾಪಿಸಿದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವಿಶೇಷವಾಗಿ ಎಲ್ಲಾ ಸೇವಾ ಕ್ಷೇತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಜಾತಿಮತ ಪಂಥಗಳನ್ನು ಮೀರಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೈತರು, ಸೈನಿಕರನ್ನು ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಮಾತನಾಡಿ, ನಾವು ಮಾಡುವ ಯಾವುದೇ ಕೆಲಸವಿರಲಿ ಅದು ಮೊದಲು ದೇವರ ಕೆಲಸ ಎಂದು ತಿಳಿದುಕೊಂಡು ಮಾಡಬೇಕು. ಪರಿಶುದ್ಧ ಮನಸ್ಸಿನೊಂದಿಗೆ ಸೇವಾ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳಬೇಕು. ಯಾವುದೇ ಫಲಾಪೇಕ್ಷೆಗೆ ಒಳಪಡಬಾರದು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ, ಅಮೇರಿಕಾದಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದಂತ ವೈದ್ಯ ಡಾ. ರವಿ ದಬೀರ್, ಶಿವಮೊಗ್ಗ ಗುರುಗೃಹ ಸಂಗೀತ ವಿದ್ಯಾಲಯದ ವಿದ್ವಾನ್ ಶ್ರೀ ಶೃಂಗೇರಿ ನಾಗರಾಜ್ ಮತ್ತು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕಿ ಪ್ರಿಯಾ ಪೈ ಅವರಿಗೆ ವಿವಿಧ ಬಿರುದುಗಳನ್ನು ನೀಡಿ ಸನ್ಮಾನಿಸಲಾಯಿತು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಹರೀಣಿ ದಬೀರ್, ಮುಖಂಡರಾದ ಜಿ. ಧರ್ಮಪ್ರಸಾದ್, ಎಚ್. ತೀರ್ಥಯ್ಯ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕಿ(ಶಿಕ್ಷಣ) ಕೆ. ಸೌಮ್ಯ ರೂಪ, ಈಶ್ವರಮ್ಮ ಆಂಗ್ಲ ಪ್ರೌಢಶಾಲೆ ಮತ್ತು ಪ್ರಶಾಂತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಪ್ರಾಂಶುಪಾಲ ಎಸ್.ಎನ್ ಕೃಷ್ಣ, ಉಪ ಪ್ರಾಂಶುಪಾಲ ಎ.ಎನ್ ಜಯಕುಮಾರ್, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಎಚ್.ಪಿ ಪ್ರಸನ್ನ ಮತ್ತು ಪ್ರಶಾಂತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಟಿ.ವಿ ಸುಜಾತ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕರಾದ ಜೆ.ಪಿ ಪರಮೇಶ್ವರಪ್ಪ, ಶೀಲಮ್ಮ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಎಸ್.ಎನ್ ಕೃಷ್ಣ, ಡಾ. ಎನ್. ಸತೀಶ್ಚಂದ್ರ, ದಿನೇಶ್, ಎಂ. ನಿತ್ಯಾ, ಪ್ರಮುಖರಾದ ಆರ್. ವಿನಯ್, ಬಿ. ಚೀಲೂರಪ್ಪ, ಸಂತೋಷ್ ಜಿ. ವರ್ಣೇಕರ್, ಎಚ್.ಪಿ ಶಿವಪ್ಪ, ರಾಮಕೃಷ್ಣಯ್ಯ, ಕೆ. ಗೋಪಾಲ್, ಸಿ.ಆರ್ ಚೇತನ್, ಡಾ. ವೀಣಾ ಭಟ್, ಡಾ. ಎಸ್. ಮಲ್ಲಿಕಾರ್ಜುನಪ್ಪ, ಸುರೇಶ್ ನಾಯರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.