ಕೊಂಡಜ್ಜಿ ಗ್ರಾಮದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 23, 2026, 01:45 AM IST
22ಎಚ್ಎಸ್ಎನ್6 : ಕೊಂಡಜ್ಜಿ ಗ್ರಾಮದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ. | Kannada Prabha

ಸಾರಾಂಶ

ಸಾಲಗಾಮೆ ಹೋಬಳಿಯ ಕೊಂಡಜ್ಜಿ ಗ್ರಾಮದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ, ಶ್ರೀ ದ್ಯಾವಮ್ಮ ದೇವಿ, ಶ್ರೀ ಸರಪಳಿ ಕೆಂಚರಾಯಸ್ವಾಮಿ ಹಾಗೂ ಶ್ರೀ ಗಾಳಿಕೆರೆ ಕೆಂಚರಾಯಸ್ವಾಮಿಯವರ 6ನೇ ವರ್ಷದ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 2 ಮತ್ತು 3ರಂದು ಅದ್ಧೂರಿಯಾಗಿ ಆಚರಿಸಲು ಗ್ರಾಮಸ್ಥರು ಭಾರಿ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಸಂಸ್ಕೃತಿ, ಆಚಾರವಿಚಾರ ಹಾಗೂ ಭಕ್ತಿಭಾವದ ಪ್ರತೀಕವಾಗಿರುವ ಈ ಜಾತ್ರೆ ಪ್ರತಿ ವರ್ಷವೂ ವಿಶೇಷ ಮಹತ್ವವನ್ನು ಹೊಂದಿದ್ದು, ಈ ಬಾರಿಯೂ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಸಾಲಗಾಮೆ ಹೋಬಳಿಯ ಕೊಂಡಜ್ಜಿ ಗ್ರಾಮದಲ್ಲಿ ಶ್ರೀ ಶಕುನ ರಂಗನಾಥಸ್ವಾಮಿ, ಶ್ರೀ ದ್ಯಾವಮ್ಮ ದೇವಿ, ಶ್ರೀ ಸರಪಳಿ ಕೆಂಚರಾಯಸ್ವಾಮಿ ಹಾಗೂ ಶ್ರೀ ಗಾಳಿಕೆರೆ ಕೆಂಚರಾಯಸ್ವಾಮಿಯವರ 6ನೇ ವರ್ಷದ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 2 ಮತ್ತು 3ರಂದು ಅದ್ಧೂರಿಯಾಗಿ ಆಚರಿಸಲು ಗ್ರಾಮಸ್ಥರು ಭಾರಿ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಸಂಸ್ಕೃತಿ, ಆಚಾರವಿಚಾರ ಹಾಗೂ ಭಕ್ತಿಭಾವದ ಪ್ರತೀಕವಾಗಿರುವ ಈ ಜಾತ್ರೆ ಪ್ರತಿ ವರ್ಷವೂ ವಿಶೇಷ ಮಹತ್ವವನ್ನು ಹೊಂದಿದ್ದು, ಈ ಬಾರಿಯೂ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರೆಯ ಅಂಗವಾಗಿ ಏಪ್ರಿಲ್ 2ರಂದು ಬೆಳಿಗ್ಗೆ 6.30ಕ್ಕೆ ಶ್ರೀರಾಮದೇವರಹಳ್ಳದಲ್ಲಿ ಪವನ್ ಆಚಾರ್‌ ಅವರ ಸಮ್ಮುಖದಲ್ಲಿ ದೃಷ್ಟಿ ಪೂಜೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಲಿದೆ. ಈ ಪೂಜೆಗಳಲ್ಲಿ ಸ್ಥಳೀಯ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಂತರ ಸಂಜೆ ೪ ಗಂಟೆಗೆ ಶ್ರೀ ಲಕ್ಷ್ಮೀ ವರದರಾಜಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ೧೦೧ ಎಡೆ ಹರಿಸೇವೆ ನಡೆಯಲಿದೆ. ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ತಮ್ಮ ಇಚ್ಛಾರ್ಥಗಳನ್ನು ಸಲ್ಲಿಸಿ ದೇವರ ಕೃಪೆ ಕೋರುತ್ತಾರೆ. ಸಂಜೆ ೫ ಗಂಟೆಗೆ ಜಾತ್ರೆಯ ಮುಖ್ಯ ಆಕರ್ಷಣೆಯಾದ ಚಾಮದೇವರ ಉತ್ಸವ ಹಾಗೂ ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಲಿದೆ. ಇದೇ ಸಂದರ್ಭದಲ್ಲಿ ಶ್ರೀ ಗುರು ಬೂದೇಶ್ವರಸ್ವಾಮಿ ಮತ್ತು ಪಾರ್ವತಮ್ಮ ದೇವಿಯವರ ಬೆಳ್ಳಿ ರಥೋತ್ಸವ ಭಕ್ತರ ಮನಸೆಳೆಯಲಿದ್ದು, ಗ್ರಾಮದೆಲ್ಲೆಡೆ ಭಕ್ತಿ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ. ಈ ಉತ್ಸವದಲ್ಲಿ ಭಜನೆ ತಂಡಗಳು, ಮೇಳತಾಳಗಳ ನಾದ ಹಾಗೂ ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ವಿಶೇಷ ಕಳೆ ತುಂಬಲಿವೆ. ರಾತ್ರಿ ೧೦ ಗಂಟೆಗೆ ಭಕ್ತರಿಗಾಗಿ ಮಹಾ ಅನ್ನದಾನವನ್ನು ಆಯೋಜಿಸಲಾಗಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.ಏಪ್ರಿಲ್ ೩ರಂದು ಬೆಳಿಗ್ಗೆ ೫ ಗಂಟೆಗೆ ಶ್ರೀ ಸರಪಳಿ ಕೆಂಚರಾಯಸ್ವಾಮಿ, ಗಾಳಿಕೆರೆ ಕೆಂಚರಾಯಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ದೃಷ್ಟಿ ಪೂಜೆ ನಡೆಯಲಿದೆ. ಬೆಳಿಗ್ಗೆ ೭.೩೦ಕ್ಕೆ ಬಲಿಪ್ರಧಾನ ವಿಧಿ ನಡೆಯಲಿದ್ದು, ಗ್ರಾಮೀಣ ಸಂಪ್ರದಾಯದ ಪ್ರಮುಖ ಭಾಗವಾಗಿ ಇದನ್ನು ಆಚರಿಸಲಾಗುತ್ತದೆ. ಮಧ್ಯಾಹ್ನ ೨.೩೦ಕ್ಕೆ ಮತ್ತೊಮ್ಮೆ ಅನ್ನದಾನವನ್ನು ಏರ್ಪಡಿಸಲಾಗಿದ್ದು, ದೂರದೂರಿನಿಂದ ಆಗಮಿಸುವ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಗ್ರಾಮೀಣ ಏಕತೆ, ಸಹಕಾರ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ವಿವಿಧ ಗ್ರಾಮಗಳ ಜನರು ಒಂದಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುತ್ತಾರೆ. ಕೊಂಡಜ್ಜಿ, ಮಾದಿಹಳ್ಳಿ, ಕಕ್ಕಹಳ್ಳಿ, ಬಲ್ಲೇನಹಳ್ಳಿ, ಆಲದಹಳ್ಳಿ, ಕಾಗನೂರು, ರಾಯಪುರ ಸೇರಿದಂತೆ ಅನೇಕ ಊರುಗಳ ಭಕ್ತರು ಹಾಗೂ ದಾನಿಗಳು ಜಾತ್ರೆಗೆ ಸಹಕಾರ ನೀಡುತ್ತಿದ್ದಾರೆ. ಜಾತ್ರೆಯ ಯಶಸ್ವಿ ಆಯೋಜನೆಗಾಗಿ ಬೂದೇಶ್ವರಸ್ವಾಮಿ ಮಠದ ಯುವಕರು, ಸ್ಥಳೀಯ ಸೇವಾ ಬಳಗ ಹಾಗೂ ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದು, ಸ್ವಚ್ಛತೆ, ಭದ್ರತೆ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಸವರಾಜುಸ್ವಾಮಿ (ಅಡಗೂರು ಕೋಡಿಹಳ್ಳಿ), ಕುಮಾರ್ ವೆಂಕಟೇಶ್, ಗಂಗಾಧರ್‌, ಕೃಷ್ಣಮೂರ್ತಿ ಸೇರಿದಂತೆ ಅರ್ಚಕರು ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಲಿದ್ದಾರೆ.ಒಟ್ಟಾರೆ, ಎರಡು ದಿನಗಳ ಕಾಲ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಿ, ಸಂಪ್ರದಾಯ, ಸಂಸ್ಕೃತಿ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂಭ್ರಮ ಮೆರೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು,ಮನ, ಧನ ಸಹಾಯ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಸಮಿತಿ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವೆ ಎಂದ ಅರ್ಪಿತಾ ಪಟೇಲ್‌
ಪಡಗೂರು ಅಡವಿ ಮಠದಲ್ಲಿ ವಚನ ಕಲ್ಯಾಣ