ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀಕ್ಷೇತ್ರ ಕೊಡುಗೆ ಅಪಾರ: ಬಿ.ಪ್ರಕಾಶ್

KannadaprabhaNewsNetwork |  
Published : Aug 27, 2026, 02:00 AM IST
26ಕೆಎಂಎನ್ ಡಿ14 | Kannada Prabha

ಸಾರಾಂಶ

ದೇಶದಲ್ಲಿ ಪ್ರಥಮ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಅತಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ, ಸೌಲಭ್ಯ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಬಿ.ಪ್ರಕಾಶ್ ಅಭಿಪ್ರಾಯಪಟ್ಟರು.

ತಾಲೂಕಿನ ಬೊಮ್ಮೇನಹಳ್ಳಿ ಶ್ರೀಮಾಸ್ತಮ್ಮ ಶ್ರೀಹುಚ್ಚಮ್ಮ ಮತ್ತು ಶ್ರೀ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಿಕ್ಕೇರಿ ಹಾಗೂ ಹರಿಹರಪುರ ವಲಯದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಪ್ರಥಮ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಅತಿ ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ, ಸೌಲಭ್ಯ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದು ಶ್ಲಾಘಿಸಿದರು.

ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ದೇಶದಲ್ಲಿಯೇ ಮಾದರಿಯಾಗಿದೆ. ಕೇವಲ ಧಾರ್ಮಿಕ ಸಂಸ್ಥೆಯಾಗಿ ಉಳಿಯದೆ ಸಾಮಾಜಿಕ ಕ್ರಾಂತಿ ಮಾಡಿ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಇದುವರೆಗೂ ಸುಮಾರು ಸಾವಿರಾರು ಕೋಟಿ ರು.ಗೂ ಅಧಿಕ ಸಾಲವನ್ನು ಸ್ವಸಹಾಯ ಸಂಘಗಳ ಮೂಲಕ ನೀಡಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದರು.

ಮಹಿಳೆಯರು ಸಣ್ಣ ಬಡ್ಡಿದರದಲ್ಲಿ ಸಾಲ ಪಡೆದು ಹೈನುಗಾರಿಕೆ, ಸಣ್ಣ ವ್ಯಾಪಾರ, ಕೃಷಿ ಚಟುವಟಿಕೆ ಮಾಡಿ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಮೇಲೆತ್ತುತ್ತಿದ್ದಾರೆ. ಪ್ರಗತಿ ನಿಧಿ, ಕೃಷಿ ನಿಧಿ, ವಸತಿ ಯೋಜನೆ, ವಿದ್ಯಾರ್ಥಿ ವೇತನ, ಜನಜಾಗೃತಿ, ವ್ಯಸನಮುಕ್ತ ಶಿಬಿರ, ಹಸಿರು ಕ್ರಾಂತಿ, ಆರೋಗ್ಯ ಶಿಬಿರ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂಗು ಸಂಸ್ಥೆ ಜನಪರ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.

ಹರಿಹರಪುರ ವಲಯದ ಮೇಲ್ವಿಚಾರಕಿ ಸಂಗೀತ ದಿನೇಶ್, ಸೇವ ಪ್ರತಿನಿಧಿಗಳ ನೇತೃತ್ವದಲ್ಲಿ ದೇವಸ್ಥಾನವನ್ನು ಹೂವು, ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಹಿಳೆಯರು ಮುತ್ತೈದೆಯರಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಕಳಸ ಸ್ಥಾಪಿಸಿ, ವರಮಹಾಲಕ್ಷ್ಮಿ ದೇವಿಗೆ ಅರಿಶಿನ-ಕುಂಕುಮ, ಬಳೆ, ಹೂವುಗಳಿಂದ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಸಂಘದ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕಿ ಲೀಲಾವತಿ, ಕಿಕ್ಕೇರಿ ಯೋಜನಾಧಿಕಾರಿ ಶ್ರೀನಿವಾಸ್, ಪುರೋಹಿತ ಪುನೀತ್, ಗ್ರಾಪಂ ಮಾಜಿ ಸದಸ್ಯೆ ಲತಾ, ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ, ಜನ ಜಾಗೃತಿ ಜಿಲ್ಲಾ ನಿರ್ದೇಶಕ ಡಿ.ಸಿ.ಕುಮಾರ್, ಹರಿಹರಪುರ ವಲಯದ ಮೇಲ್ವಿಚಾರಕಿ ಸಂಗೀತ ದಿನೇಶ್, ಸೇವಾ ಪ್ರತಿನಿಧಿಗಳಾದ ಮಂಜುಳ, ಶೃತಿ, ಪೂರ್ಣಿಮಾ, ಗೀತಾ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಗಡಾಯಿಸಿದ ಸರ್ವರ್ ಸಮಸ್ಯೆ
ಮಠಗಳು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದು: ಸುತ್ತೂರು ಶ್ರೀಗಳು