ಪ್ರತಿ ವರ್ಷದಂತೆ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ, ಭಕ್ತರ ಸಹಭಾಗಿತ್ವದಲ್ಲಿ ೧೦ ದಿನ ಶರನ್ನವರಾತ್ರಿ ಉತ್ಸವ ನಡೆಸಲಾಗುತ್ತಿದೆ.
ಕಾರಟಗಿ:
ಪಟ್ಟಣದ ಪುರಾತನ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ೯೧ನೇ ವರ್ಷದ ಶರನ್ನವರಾತ್ರಿ ಜಾತ್ರಾಮಹೋತ್ಸವದ ಸಿದ್ಧತಾ ಸಭೆ ಶುಕ್ರವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಉಪ ತಹಸೀಲ್ದಾರ್ ಜಗದೀಶ ಮಾತನಾಡಿ, ಪ್ರತಿ ವರ್ಷದಂತೆ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ, ಭಕ್ತರ ಸಹಭಾಗಿತ್ವದಲ್ಲಿ ೧೦ ದಿನ ಶರನ್ನವರಾತ್ರಿ ಉತ್ಸವ ನಡೆಸಲಾಗುತ್ತಿದೆ. ಸೆ. ೨೨ರಿಂದ ಅ. ೨ರ ವರೆಗೆ ನಡೆಯುವ ನವರಾತ್ರಿ ಉತ್ಸವದ ನಿಮಿತ್ತ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಮತ್ತು ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಅಗತ್ಯ ಕ್ರಮಕೈಗೊಳ್ಳಲಾಗುವುದು. ಉತ್ತರ ದಿಕ್ಕಿನಲ್ಲಿ ದ್ವಾರ ಬಾಗಿಲು ನಿರ್ಮಿಸಿ ಗೇಟ್ ಅಳವಡಿಸಲು ಸಮಿತಿಯ ಕಾರ್ಯದರ್ಶಿಗೆ ಸೂಚಿಸಿದರು.
ದಶಮಿಯ ಮುಂಚೆ ದಿನ ಸೆ. ೩೦ರಂದು ಅಷ್ಟಮಿ ದಿನದಂದು ನಡೆಯುವ ಶ್ರೀಲಕ್ಷ್ಮೀ ವೆಂಕಟೇಶ್ವರ ರಥೋತ್ಸವ (ಉಚ್ಚಾಯ) ವೈಭಯುತವಾಗಿ ಭಕ್ತರ ನೇತೃತ್ವದಲ್ಲಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಉಚ್ಚಾಯದ ಕುರಿತು ಪರಿಶೀಲಿಸಿ ಅಲಂಕಾರ ಮಾಡಿಸಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಂಡ ಮುಖಂಡರು, ಸಾರ್ವಜನಿಕರು, ಪ್ರಮುಖರು ಮಾತನಾಡಿ, ದೇವಸ್ಥಾನಕ್ಕೆ ಸಾಕಷ್ಟು ಆದಾಯವಿದ್ದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೂಡಲೇ ಕೈಗೊಳ್ಳಲು ಒತ್ತಾಯಿಸಿದರು.
ಈ ವೇಳೆ ಕಂದಾಯ ನೀರಕ್ಷಕಿ ಸಂಗಮ್ಮ ಹಿರೇಮಠ, ಶಿರಸ್ತೆದಾರ ಸಾವಿತ್ರಿಬಾಯಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ, ಎಎಸ್ಐ ಬಸವರಾಜ, ಗ್ರಾಮಲೆಕ್ಕಾಧಿಕಾರಿ ಸಂತೋಶ, ವಿದ್ಯಾಶ್ರೀ, ದೇವಸ್ಥಾನದ ಅರ್ಚಕ ಭೋಗೇಶಾಚಾರ ಇನಾಮದಾರ, ಪ್ರಮುಖರಾದ ನಾರಾಯಣಪ್ಪ ಈಡಿಗೇರ, ಪ್ರಹ್ಲಾದ ಜ್ಯೋಶಿ, ಮರಿಯಪ್ಪ ಸಾಲೋಣಿ, ಬಂಡಿ ಅಯ್ಯಪ್ಪ, ಸೋಮನಾಥ ಉಡಮಕಲ್ ಸಣ್ಣ ಹನುಂತಪ್ಪ ಸಜ್ಜಿಹೊಲ, ಶರಣಪ್ಪ ಹೂಗಾರ, ವೆಂಕಟೇಶ ಕಟ್ಟೆಮನಿ, ಅಯ್ಯಪ್ಪ ಸುದ್ದಿ, ವಿಜಯೇಂದ್ರ ಆಚಾರ, ವೆಂಕಟೇಶ ಸೋಮನಾಳ ಸೇರಿದಂತೆ ಸೇವಾಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.