ಘಟನೆ ಖಂಡಿಸಿ, ಕುಟುಂಬಕ್ಕೆ ಸಾಂತ್ವನ, ಧೈರ್ಯದ ಸಂದೇಶ ನೀಡಿದ ಜಗದ್ಗುರು
ಕೆಲ ದಿನಗಳ ಹಿಂದೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಕುಟುಂಬಗಳಿಗೆ ಶೃಂಗೇರಿ ಶಾರದಾ ಪೀಠದಿಂದ ಪ್ರತೀ ಕುಟುಂಬಕ್ಕೆ ತಲಾ ₹2 ಲಕ್ಷ ದಂತೆ ₹52 ಲಕ್ಷ ಪರಿಹಾರ ಘೋಷಿಸಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಈ ಘಟನೆ ಖಂಡಿಸಿ ತಮ್ಮ ಸಂದೇಶದ ಮೂಲಕ ಹತ್ಯೆಗೀಡಾದ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹಾಗೂ ಧೈರ್ಯ ತಿಳಿಸಿದ್ದಾರೆ.
ಇದು ಅತ್ಯಂತ ದುಖಕರ, ಅಮಾನವೀಯ ಘಟನೆ. ಕಾಶ್ಮೀರದ ಸೌಂದರ್ಯ ನೋಡಲು, ಮನಸ್ಸಿಗೆ ಶಾಂತಿ ಪಡೆಯಲು ಅಲ್ಲಿಗೆ ತೆರಳಿದ್ದವರನ್ನು ಹಿಂದೂ ಧರ್ಮದವರೆಂದು ಗುರುತಿಸಿ ಹತ್ಯೆ ನಡೆಸಲಾಗಿತ್ತು. ಇಂತಹ ಅಮಾನವೀಯ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಇದನ್ನು ಸಮರ್ಥನೆ ಮಾಡಬಾರದು. ಸಮರ್ಥನೆ ಮಾಡುವವರು ಮನುಷ್ಯರೇ ಅಲ್ಲ.ಎಲ್ಲರೂ ಒಗ್ಗಟ್ಟಾಗಬೇಕು. ಐಕ್ಯತೆ ಸಾಧಿಸಬೇಕು. ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಬದ್ದರಾಗಬೇಕು. ಇದು ಪರಮಪವಿತ್ರ ದೇಶ. ಈ ದೇಶಕ್ಕೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಇದೆ. ಅನಾದಿ ಕಾಲದಿಂದಲೂ ಹಿಂದೂ ಧರ್ಮದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ವೈವಿದ್ಯತೆ, ಸಂಸ್ಕೃತಿ ಇದೆ ಎಂದರು.
ಇಂತಹ ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆದಿರುವುದು ಅತ್ಯಂತ ನೋವಿನ ಸಂಗತಿ. ಅವರನ್ನು ವಾಪಸ್ಸು ತರಲು ಸಾಧ್ಯ ವಿಲ್ಲ. ಅವರ ಕುಟುಂಬ ದುಖದಲ್ಲಿದೆ. ನೋವಿನಲ್ಲಿದೆ, ಸಂಕಷ್ಟದಲ್ಲಿದೆ.ಅವರಿಗೆ ಧೈರ್ಯ ತುಂಬುವ, ಮನಸ್ಸನ್ನು ಸಮಾಧಾನ ಗೊಳಿಸುವ, ಹೊಸಜೀವನ ನಡೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ಅಕ್ಷಯ ತೃತಿಯ ಸಂದರ್ಭದಲ್ಲಿ ಆ ಕುಟುಂಬಗಳಿಗೆ ತಲಾ ₹2 ಲಕ್ಷ ಮಠದಿಂದ ನೀಡಲಾಗುತ್ತಿದೆ. ಅವರ ಕುಟುಂಬಕ್ಕೆ ಶ್ರೇಯಸ್ಸು ಸಿಗುವಂತಾಗಲಿ.
1 ಶ್ರೀ ಚಿತ್ರ 2-ಶ್ರೀ ವಿಧುಶೇಖರ ಭಾರತೀ ತೀರ್ಥರು.