ಕೂಡ್ಲಿಗಿ: ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರ ನಡುವಿನ ಭಿನ್ನಾಭಿಪ್ರಾಯ ಶಮನಗೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದ ಬಂಗಾರು ಹನುಮಂತು ಅವರಿಗೆ ಟಿಕೆಟ್ ಕೈ ತಪ್ಪಲು ಶ್ರೀರಾಮುಲು ನೇರವಾಗಿ ಕಾರಣವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಬಂಗಾರು ಹನುಮಂತು- ಶ್ರೀರಾಮುಲು ಮಧ್ಯೆ ಬಹುದಿನಗಳ ಕಾಲ ಸಂಬಂಧ ಹಳಸಿತ್ತು.ಆದರೆ ಇತ್ತೀಚೆಗೆ ಕೂಡ್ಲಿಗಿಯಲ್ಲಿ ನಡೆದ ಮಂಡಲ ನೂತನ ಅಧ್ಯಕ್ಷ ಬಣವಿಕಲ್ಲು ರಾಜು ಅವರ ಪದಗ್ರಹಣ ಹಾಗೂ ಗ್ರಾಮ ಚಲೋ ಕಾರ್ಯಕ್ರಮದ ನಂತರ ಬಂಗಾರು ಹನುಮಂತು ಮನೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಔಪಚಾರಿಕ ಸಭೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮರೆತು ಇಬ್ಬರು ಬಿಗಿದಪ್ಪಿಕೊಂಡು ಹಳೆಯದೆಲ್ಲ ಮರೆತು ಒಂದಾದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ನನ್ನ ಹಾಗೂ ಬಂಗಾರು ಹನುಮಂತು ನಡುವೆ ಕೆಲವರು ಹುಳಿ ಹಿಂಡಿದ್ದರು. ಹೀಗಾಗಿ ನಮ್ಮಿಬ್ಬರ ನಡುವೆ ಕೆಲವು ದಿನಗಳ ಕಾಲ ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ. ಆದರೆ ಈಗ ವಾಸ್ತವ ಏನೆಂದು ಗೊತ್ತಾಗಿದೆ. ಬರುವ ದಿನಗಳಲ್ಲಿ ಬಂಗಾರು ಹನುಮಂತು ಅವರಿಗೆ ಏನು ನ್ಯಾಯ ದೊರೆಯಬೇಕೋ ಅದನ್ನು ದೊರಕಿಸಿಕೊಡುತ್ತೇನೆ ಎಂದರು.ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ನನಗೆ ಶ್ರೀರಾಮುಲು ಅಣ್ಣನಿದ್ದಂತೆ. ನಿರಂತರವಾಗಿ ನಮ್ಮ ಸ್ನೇಹ, ಬಾಂಧವ್ಯ ಇದ್ದು, ಇತ್ತೀಚೆಗೆ ಕೆಲವು ಸ್ವಹಿತಾಸಕ್ತಿಗಳಿಂದ ವ್ಯತ್ಯಾಸಗಳು ಆಗಿದ್ದವು. ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದರು.
ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ನಾಗರಾಜ, ಹಿರಿಯ ಮುಖಂಡ ಕೆ.ಎಚ್. ವೀರನಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹುರುಳಿಹಾಳ್ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಂಜೀವ್ ರೆಡ್ಡಿ, ನಿಕಟಪೂರ್ವ ಮಂಡಲ ಅಧ್ಯಕ್ಷ ಚೆನ್ನಪ್ಪ, ಕಲ್ಲೇಶ್ ಗೌಡ, ಬಿ.ಪಿ. ಚಂದ್ರಮೌಳಿ, ಉಜ್ಜಿನ ಲೋಕಣ್ಣ, ಕೋಣನಹಳ್ಳಿ ಶಂಬಯ್ಯ ನೇತ್ರಾವತಿ, ಎಲ್. ಪವಿತ್ರಾ ಶಾರದಾ ಹಾಗೂ ಮುಖಂಡರು ಇದ್ದರು.