ಸಂಡೂರು: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪಕ್ಷದ ಮುಖಂಡರಾದ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ ಅವರೊಂದಿಗೆ ತಾಲೂಕಿನ ಕೃಷ್ಣಾನಗರ, ದೌಲತ್ಪುರ, ವೆಂಕಟಗಿರಿ, ಜೈಸಿಂಗಾಪುರ, ಸಿದ್ದಾಪುರ, ಸುಶೀಲಾನಗರ, ನಾರಾಯಣಪುರ, ವಿಠಲನಗರ, ರಣಜಿತ್ಪುರ, ನರಸಿಂಗಾಪುರ, ದೋಣಿಮಲೈ, ಭುಜಂಗನಗರ, ಮುರಾರಿಪುರ ಹಾಗೂ ತಾರಾನಗರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಹಿಂದು-ಮುಸ್ಲಿಂ ಭಾಯಿ ಭಾಯಿ, ಭಾರತ ಮಾತೆ ನಮ್ಮೆಲ್ಲರ ತಾಯಿ ಎನ್ನುವುದು ಬಿಜೆಪಿ ವಾಕ್ಯವಾಗಿದೆ ಎಂದರು.
ಯಾರಾದರೂ ಜಾತಿ ವಿಷಯ ತಂದರೆ ನಂಬಬೇಡಿ. ಇಂದು ನಮಗೆ ಬೇಕಾಗಿರುವುದು ಒಳ್ಳೆಯ ಅಭಿವೃದ್ಧಿ. ಒಳ್ಳೆಯ ರಸ್ತೆ, ಶುದ್ಧ ಕುಡಿಯುವ ನೀರು, ಹೈಟೆಕ್ ಶಾಲೆಗಳು, ಆಸ್ಪತ್ರೆ, ಯುವಜನತೆಗೆ ಉದ್ಯೋಗ ಸಿಗುವಂತಾಗಬೇಕು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ದೊರೆತ ಅನುದಾನದಿಂದ ಸಂಡೂರು-ತೋರಣಗಲ್ಲು-ಹೊಸಪೇಟೆ-ಕೂಡ್ಲಿಗಿ, ಶ್ರೀಕುಮಾರಸ್ವಾಮಿ ರಸ್ತೆ ದುರಸ್ತಿ ಮಾಡಲಾಯಿತು.ಜನತೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಬಂಗ್ಲೆ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ದೌಲತ್ಪುರದಲ್ಲಿ ಭಾನುವಾರ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಪಕ್ಷದ ಮುಖಂಡರೊಂದಿಗೆ ಸಾಗಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮತಯಾಚನೆ ಮಾಡಿದರು.