ರಾಜಣ್ಣ ನಿವಾಸಕ್ಕೆ ‘ಕೈ’ ಎಸ್ಟಿಶಾಸಕರು ಭೇಟಿ, ಸಾಂತ್ವನ

KannadaprabhaNewsNetwork |  
Published : Aug 14, 2025, 01:00 AM IST

ಸಾರಾಂಶ

ಸಂಪುಟದಿಂದ ವಜಾಗೊಂಡಿರುವ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರ ನಿವಾಸಕ್ಕೆ ಬುಧವಾರ ಸಚಿವ ಸತೀಶ್‌ ಜಾರಕಿಹೊಳಿ ಸೇರಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಂಗ್ರೆಸ್‌ನ ಹಲವು ಶಾಸಕರು ಭೇಟಿ ನೀಡಿ ಸಮಾಧಾನಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಪುಟದಿಂದ ವಜಾಗೊಂಡಿರುವ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರ ನಿವಾಸಕ್ಕೆ ಬುಧವಾರ ಸಚಿವ ಸತೀಶ್‌ ಜಾರಕಿಹೊಳಿ ಸೇರಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಂಗ್ರೆಸ್‌ನ ಹಲವು ಶಾಸಕರು ಭೇಟಿ ನೀಡಿ ಸಮಾಧಾನಪಡಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಶಾಸಕರಾದ ಟಿ.ರಘುಮೂರ್ತಿ, ಅನಿಲ್‌ ಚಿಕ್ಕಮಾದು, ಕೆ.ಎಸ್‌.ಬಸವಂತಪ್ಪ, ಬಿ.ಎಂ.ನಾಗರಾಜು, ಗಣೇಶ್‌ ಪ್ರಸಾದ್‌, ಹರೀಶ್‌ ಗೌಡ, ಬಸವನಗೌಡ ತುರುವಿಹಾಳ್‌, ರವಿಶಂಕರ್‌, ಬಸವನಗೌಡ ದದ್ದಲ್‌ ಮತ್ತಿತರರು ರಾಜಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.ಮುಂಗಾರು ಅಧೀವೇಶನ ಮುಗಿದ ಬಳಿಕ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡುತ್ತೇವೆ ಎಂದೂ ಈ ಸಂದರ್ಭದಲ್ಲಿ ಈ ಮುಖಂಡರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಮತಗಳವು ಆರೋಪಕ್ಕೆ ವಿರುದ್ಧವಾಗಿ ಮಾತನಾಡಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿರುವ ರಾಜಣ್ಣ ಅವರ ನಿವಾಸಕ್ಕೆ ಬುಧವಾರ ಆಗಮಿಸಿದ ಕಾಂಗ್ರೆಸ್‌ ಜನಪ್ರತಿನಿಧಿಗಳ ತಂಡ ರಾಜಣ್ಣರನ್ನು ಸಮಾಧಾನಪಡಿಸುವ ಕಾರ್ಯಕ್ಕೆ ಮುಂದಾಗಿದೆ.

‘ಮುಂಗಾರು ಅಧಿವೇಶನ ಬಳಿಕ ದೆಹಲಿಗೆ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ವರಿಷ್ಠರಿಗೆ ವಿವರಿಸುತ್ತೇವೆ. ಮತಗಳವಿಗೆ ಸಂಬಂಧಿಸಿ ನೀವೇನೂ ಕೆಟ್ಟದಾಗಿ, ತೀಕ್ಷ್ಣವಾಗಿ ಆರೋಪ ಮಾಡಿಲ್ಲ. ಆದರೆ ಇದನ್ನು ಒಂದು ಬಣ ವಿಪರೀತಕ್ಕೆ ಕೊಂಡೊಯ್ದಿದ್ದರಿಂದ ಈ ರೀತಿ ಆಗಿದೆ. ಈ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಭವಿಷ್ಯದಲ್ಲಿ ಎಲ್ಲವೂ ಸರಿಯಾಗಲಿದೆ’ ಎಂದು ಈ ತಂಡ ಅಭಯ ನೀಡಿದೆ ಎಂದು ಹೇಳಲಾಗಿದೆ.

ಈ ಹಿಂದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇದೇ ಸಮುದಾಯಕ್ಕೇ ಸೇರಿರುವ ರಾಜಣ್ಣ ಅವರೂ ಸಂಪುಟದಿಂದ ವಜಾಗೊಂಡಿರುವುದರಿಂದ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಾಲ್ಮೀಕಿ ಸಮುದಾಯದವರನ್ನೇ ಪರಿಗಣಿಸಲು ವರಿಷ್ಠರಿಗೆ ಮನವಿ ಮಾಡಬೇಕು ಎಂದು ಈ ಸಂದರ್ಭದಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ವಾಲ್ಮೀಕಿ ಸಮುದಾಯಕ್ಕೆ ಸಚಿವ

ಸ್ಥಾನ ನೀಡಲು ಸಿಎಂಗೆ ಮನವಿ

ಮಾಜಿ ಸಚಿವ ರಾಜಣ್ಣ ಅವರ ಬಳಿಕ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದ ತಂಡ, ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವಾಗ ವಾಲ್ಮೀಕಿ ಸಮುದಾಯವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದೆ.

ನಾಗೇಂದ್ರ ಮತ್ತು ರಾಜಣ್ಣ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದು, ಇದರಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿ ಮಾಡುವಾಗ ವಾಲ್ಮೀಕಿ ಸಮುದಾಯದವರನ್ನೇ ಪರಿಗಣಿಸಬೇಕು ಎಂದು ನಿಯೋಗ ಕೋರಿಕೊಂಡಿದೆ. ಆಗ ಸಿದ್ದರಾಮಯ್ಯ ಅವರು, ‘ಈ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚೆ ನಡೆಸುತ್ತೇನೆ’ ಎಂದು ಸಕಾರಾತ್ಮಕವಾಗಿ ಭರವಸೆ ನೀಡಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ