ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿ ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಗುರುವಾರದಿಂದ ಮ್ಯಾಜಿಸ್ಟೀರಿಯಲ್ ವಿಚಾರಣೆ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿ ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಗುರುವಾರದಿಂದ ಮ್ಯಾಜಿಸ್ಟೀರಿಯಲ್ ವಿಚಾರಣೆ ಆರಂಭಿಸಿದ್ದಾರೆ. ತಳ್ಳಾಟ, ನೂಕಾಟದಿಂದ ದುರಂತ ಸಂಭವಿಸಿದ ಕ್ರೀಡಾಂಗಣದ ವಿವಿಧ ಪ್ರವೇಶ ದ್ವಾರಗಳು, ಬ್ಯಾರಿಕೇಡ್ ಹಾಕಿದ್ದ ಸ್ಥಳ, ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮತ್ತು ವಿಧಾನಸೌಧದ ವಿವಿಧೆಡೆ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್, ಕೆಎಸ್ಸಿಎ ಕಾರ್ಯದರ್ಶಿ, ಕಾರ್ಯಕ್ರಮ ಆಯೋಜಕ ಕಂಪನಿ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಕರು, ಆರ್ಸಿಬಿ ಆಡಳಿತ ಮಂಡಳಿ, ಮೃತ ವ್ಯಕ್ತಿಗಳ ಕುಟುಂಬದವರು, ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರೂ ಸರ್ಕಾರಕ್ಕೆ ತಿಳಿಸದಿರುವ ದೂರುಗಳು ಕೇಳಿ ಬಂದಿವೆ. ಈ ಕುರಿತು ಮೆಟ್ರೋ ಅಧಿಕಾರಿಗಳಿಗೂ ನೋಟಿಸ್ ನೀಡಿ ಉತ್ತರ ಪಡೆಯಲಾಗುವುದು ಎಂದರು.
ಘಟನೆ ಕುರಿತು ಸಮಗ್ರ ಅವಲೋಕನ, ವಿಚಾರಣೆ ನಡೆಸಲಾಗುತ್ತದೆ. ಸಿಸಿ ಕ್ಯಾಮೆರಾ ವಿಡಿಯೋ ಮತ್ತು ಲಭ್ಯವಿರುವ ವಿಡಿಯೋಗಳ ಪರಿಶೀಲನೆ ನಡೆಸಿ ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಈ ಘಟನೆ ತಪ್ಪಿಸಲು ಏನೆಲ್ಲ ಮಾಡಬಹುದಿತ್ತು ಎನ್ನುವ ವಿಚಾರಗಳ ಬಗ್ಗೆಯೂ ಪರಿಶೀಲಿಸಲಾಗುತ್ತದೆ. ಸರ್ಕಾರ ನೀಡಿರುವ 15 ದಿನಗಳ ಕಾಲಾವಧಿಯಲ್ಲಿ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಜೂ.13ಕ್ಕೆ ಸಾರ್ವಜನಿಕರ ಹೇಳಿಕೆ ದಾಖಲು:
ಜೂ.13ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಘಟನೆ ಕುರಿತು ಮಾಹಿತಿ ಹೊಂದಿರುವವರು, ಸಾಕ್ಷಿ, ದಾಖಲೆ ಹೊಂದಿರುವವರು ಮಾಹಿತಿ ಸಲ್ಲಿಸಬಹುದಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.