ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 376 ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳು ನಿಗದಿತ ಸಮಯಕ್ಕೆ ಆರಂಭಗೊಂಡವು.
ಶಾಲಾ ಪ್ರವೇಶ ದ್ವಾರದಲ್ಲಿ ಕಾದುನಿಂತ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ ಬರಮಾಡಿಕೊಂಡರು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಜೊತೆಗೆ ಶಿಕ್ಷಕ ಸಮುದಾಯ ಹಾಗೂ ಎಸ್ಡಿಎಂಸಿ ಸಮಿತಿಯ ಸದಸ್ಯರು ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಿದರು. ತಾಲೂಕಿನ ಉದ್ದಗಲಕ್ಕೂ ಸಂಚರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಶಿಕ್ಷಕರೊಂದಿಗೆ ಸೇರಿ ಮಕ್ಕಳ ಶಾಲಾ ಪ್ರವೇಶಾತಿ ಸಂಭ್ರಮಿಸಿದರು.ಪಟ್ಟಣದ ಕೆಪಿಎಸ್ ಶಾಲೆ ಮತ್ತು ಬೂಕನಕೆರೆ ಕೆಪಿಎಸ್ ಶಾಲೆಗೆ ಆಗಮಿಸಿದ ಶಾಸಕ ಎಚ್.ಟಿ.ಮಂಜು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸೇರಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರು. ಸರ್ಕಾರದಿಂದ ನೀಡಲಾಗುತ್ತಿರುವ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ ಮತ್ತಿತರ ಶೈಕ್ಷಣಿಕ ಪರಿಕರ ವಿತರಿಸಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕ್ಷೇತ್ರದ ಶಾಸಕನಾಗಿ ನಾನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಕೆಪಿಎಸ್ ಶಾಲೆಯಲ್ಲಿ 2500ಕ್ಕೂ ಅಧಿಕ ಮಕ್ಕಳು ಕಲಿಕೆ ಮಾಡುತ್ತಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲಾ ಭಾಗಗಳಲ್ಲೂ ಪೋಷಕರು ಮತ್ತು ಶಿಕ್ಷಕರು ಒಡಗೂಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ ಶಿಕ್ಷಣ ಕ್ಷೇತ್ರ ಖಾಸಗೀಕರಣದ ಹಾವಳಿಯಿಂದ ತನ್ನಿಂದ ತಾನೇ ಮುಕ್ತಾಯಗೊಳ್ಳಲಿದೆ ಎಂದರು.
ತಾಲೂಕಿನ ದೊದ್ದನಕಟ್ಟೆ, ತೆಂಡೇಕೆರೆ ಮುಂತಾದ ಕಡೆ ಗ್ರಾಮಸ್ಥರು ಶಿಕ್ಷಕರು ಹಾಗೂ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ಸಾಲೆಗಳಿಗೆ ಕರೆತಂದು ಸಂಭ್ರಮಿಸಿದರು. ಬಹುತೇಕ ಶಾಲೆಗಳಿಗಳಲ್ಲಿ ಪೋಷಕರ ಸಭೆ ನಡೆದು ಸರ್ಕಾರಿ ಶಾಲೆಗಳ ಉಳಿವಿನ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿ ಶಾಲೆಗಳ ಅಭಿವೃದ್ದಿಗೆ ಪೋಷಕರು ಸಹಕಾರ ಕೋರಲಾಯಿತು. ತಾಲೂಕಿನ ಮಾರ್ಗೋನಹಳ್ಳಿ, ಹರಿಹರಪುರ ಮುಂತಾದ ಕಡೆ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಜಾಗೃತಿ ಜಾಥಾ ನಡೆಸಲಾಯಿತು.
ಕೆ.ಆರ್.ಪೇಟೆ:
ಗ್ರಾಮದ ನಿವೃತ್ತ ಎಂಜಿನಿಯರ್ ಶಿವಕುಮಾರ್ ಸರ್ಕಾರಿ ಉಳಿವಿಗಾಗಿ 1.45 ಕೋಟಿ ರು. ನೀಡಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.