- ತರಗನಹಳ್ಳಿಯಲ್ಲಿ ವಿಬಿ- ಜಿ ರಾಮ್ ಜಿ ಬಗ್ಗೆ ಪಾದಯಾತ್ರೆ- ಜನಜಾಗೃತಿ ಸಮಾರೋಪ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಆರ್ಥಿಕ ವ್ಯವಸ್ಥೆಯೇ ದಿವಾಳಿಯಾಗಿದೆ, ಅಭಿವೃದ್ಧಿ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ,ವಿಜಯೇಂದ್ರ ವಾಗ್ದಾಳಿ ನಡೆಸಿದರು.ಶನಿವಾರ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ವಿಬಿ- ಜಿ ರಾಮ್ ಜಿ ಬಗ್ಗೆ ಪಾದಯಾತ್ರೆ ಹಾಗೂ ಜನಜಾಗೃತಿಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಗುಂಡಿ ಮುಚ್ಚು ಗುಂಡಿ ತೆಗೆ ಎನ್ನುವ ಕಾಯಕದಲ್ಲೇ ಭ್ರಷ್ಟಾಚಾರ ನಡೆಸಿದ್ದಾರೆ. ಯಂತ್ರಗಳ ಮೂಲಕ ಕೆಲಸ ಮಾಡಿಸಿ ಯೋಜನೆ ದುರುಪಯೋಗವಾಗಿದೆ ಎಂದು ದೂರಿದರು.
ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ₹2 ಸಾವಿರ ನೀಡಿ, ಅಬಕಾರಿ ಇಲಾಖೆಗೆ ₹40 ಸಾವಿರ ಕೋಟಿ ಟಾರ್ಗೆಟ್ ನೀಡಿ ಜನರನ್ನು ಲೂಟಿ ಮಾಡಿದ್ದಾರೆ. ಪ್ರತಿ 500 ಮೀಟರ್ಗೆ ಒಂದರಂತೆ ವೈನ್ಶಾಪ್ಗಳಿಗೆ ಪರವಾನಿಗೆ ನೀಡಿ, ಹಣ ವಸೂಲಿ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರ ₹300 ಪ್ರೋತ್ಸಾಹಧನ ನೀಡುವುದಾಗಿ ಹೇಳಿ, ಪಾವತಿ ಮಾಡಿಲ್ಲ. ಜನೌಷಧಿ ಕೇಂದ್ರಗಳನ್ನು ಮುಚ್ಚುವ ಮೂಲಕ ಬಡರೋಗಿಗಳಿಗೆ ಜೀವರಕ್ಷಕ ಔಷಧಿಗಳು ಸಿಗದಂತೆ ಮಾಡಿದ್ದಾರೆ. ರಾಜ್ಯದಲ್ಲಿ 2.28 ಲಕ್ಷ ಉದ್ಯೋಗಗಳು ಖಾಲಿ ಇದ್ದರೂ, ಭರ್ತಿ ಮಾಡಿಲ್ಲ ಎಂದರು.ಸೂರಗೊಂಡನಕೊಪ್ಪದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾಯಕ್ರಮದಲ್ಲಿ ಒಳಮೀಸಲಾತಿಯಲ್ಲಿ ಅನ್ಯಾಯ ಆಗಿದೆ ಎಂದು ಯುವಕರು ಪ್ರಶ್ನಿಸಿದ್ದಕ್ಕೆ 25 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿರುವುದು ವಿಷಾದಕರ ಸಂಗತಿ. ಬಂಜಾರ ಸಮುದಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವಿಬಿ ಜಿ ರಾಮ್ ಜಿ ಬಗ್ಗೆ ಅವಳಿ ತಾಲೂಕಿನಾದ್ಯಂತ ಸುಮಾರು 200 ಕಡೆಗಳಲ್ಲಿ ಜನಜಾಗೃತಿ, ಸಂವಾದ ನಡೆಸಿ, ಸಾವಜನಿಕರು ಹಾಗೂ ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಿದ್ದೇವೆ ಎಂದು ವಿವರಿಸಿದರು.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಸವರಾಜ್ ನಾಯ್ಕ್, ಬಿಜೆಪಿ ರಾಜ್ಯ ಮುಖಂಡ ದತ್ತಾತ್ತಿ, ಜಿಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿದರು.
ಇದಕ್ಕೂ ಮೊದಲು ತಾಲೂಕಿನ ಸಿಂಗಟಗೆರೆಯಿಂದ ತರಗನಹಳ್ಳಿವರೆಗೆ 101 ಪೂರ್ಣ ಕುಂಭದೊಂದಿಗೆ ಮೆರವಣಿಗೆ ನಡೆಯಿತು. ಜಗಳೂರು ಮಾಜಿ ಶಾಸಕ ರಾಮಚಂದ್ರಪ್ಪ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಶಿವಯೋಗಿ ಸ್ವಾಮಿ, ಮಾಡಾಳು ಮಲ್ಲಿಕಾರ್ಜುನ, ಕಲ್ಲೇಶ್ ಹಾಗೂ ನೆಲಹೊನ್ನೆ ಮಂಜುನಾಥ್, ಶಿವಾನಂದ್, ರಮೇಶ್ ಗೌಡ, ಜೆ.ಕೆ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ ಸೇರಿದಂತೆ ಅನೇಕ ಜಿಲ್ಲಾ ಹಾಗೂ ತಾಲೂಕು ಮುಖಂಡರು ಉಪಸ್ಥಿತರಿದ್ದರು.- - -
(ಟಾಪ್ ಕೋಟ್) ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾದ್ಯಂತ ವಿಬಿ ಜಿ ರಾಮ್ ಜಿ ಜನಜಾಗೃತಿ ಕಾಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದೆ. ಇದಕ್ಕಾಗಿ ರಾಜ್ಯ ಬಿಜೆಪಿ ಘಟಕದಿಂದ ರೇಣುಕಾಚಾರ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಿಬಿ ಜಿ ರಾಮ್ ಜಿ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾಗ ರಾಜ್ಯ ಘಟಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದಿತು. ಆಗ ಇಡೀ ರಾಜ್ಯದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವಳಿ ತಾಲೂಕಿನಾದ್ಯಂತ 200 ಕಡೆಗಳಲ್ಲಿ ಕಾರ್ಯಕ್ರಮ ಮಾಡಿದ್ದಾರೆ.- ಬಿ.ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ.
- - --21ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿ ತಾಲೂಕಿನ ತರಗನಹಳ್ಳಿಯಲ್ಲಿ ಶನಿವಾರ ವಿಬಿ ಜಿ ರಾಮ್ ಜಿ ಬಗ್ಗೆ ನಡೆದ ಜನಜಾಗೃತಿ ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿ, ಮಾತನಾಡಿದರು.