ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರದ ಅಸಹಕಾರ: ಶೋಭಾ ಕರಂದ್ಲಾಜೆ ಆರೋಪ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ವಿಕಸಿತ ಭಾರತ ಯಾತ್ರೆಗೆ ನಮ್ಮ ರಾಜ್ಯದ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಬಾರದೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಈ ಕಾರಣಕ್ಕಾಗಿ ಎಲ್ಲೂ ಕೂಡ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಹಾಗಾಗಿ ಬ್ಯಾಂಕ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

- ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಈ ಸಮಸ್ಯೆ, ಯಾತ್ರೆಗೆ ಹೋಗದಂತೆ ಡಿಸಿ- ಜಿಪಂ ಸಿಇಓಗಳಿಗೆ ಸರ್ಕಾರದ ಸೂಚನೆ, ವಿಕಸಿತ ಭಾರತ ಯಾತ್ರೆಗೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಜೆಪಿ ಅಧಿಕಾರದಲ್ಲಿ ಇಲ್ಲದಿರುವ ಕರ್ನಾಟಕವೂ ಸೇರಿದಂತೆ ದೇಶದ ನಾಲ್ಕೈದು ರಾಜ್ಯಗಳಲ್ಲಿ ವಿಕಸಿತ ಭಾರತ ಯಾತ್ರೆಗೆ ಅಲ್ಲಿನ ಸರ್ಕಾರಗಳು ಸಹಕರಿಸುತ್ತಿಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ನೆನಪು ಮಾಡಿಸುವುದು, ಯಾರಿಗೆ ಸವಲತ್ತು ಸಿಕ್ಕಿದೆಯೋ ಅವರ ಅನುಭವವನ್ನು ಹಂಚಿಕೊಳ್ಳುವುದು ಈ ಯಾತ್ರೆಯ ಸಂಕಲ್ಪವಾಗಿದೆ. ಅದ್ದರಿಂದ ಕಳೆದ ನವೆಂಬರ್ 15 ರಂದು ಯಾತ್ರೆ ಆರಂಭಗೊಂಡಿತು. ಅದಕ್ಕೂ ಎರಡು ತಿಂಗಳು ಮುನ್ನ ಐಎಎಸ್ ಹಾಗೂ ಉನ್ನತ ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಗಿತ್ತು. ಈ ತರಬೇತಿಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು ಎಂದ ಅವರು, ವಿಕಸಿತ ಭಾರತ ಯಾತ್ರೆಗೆ ನಮ್ಮ ರಾಜ್ಯದ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಬಾರದೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಈ ಕಾರಣಕ್ಕಾಗಿ ಎಲ್ಲೂ ಕೂಡ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಹಾಗಾಗಿ ಬ್ಯಾಂಕ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದು, ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ. ಯಾವುದೇ ಯೋಜನೆ, ಸವಲತ್ತು ಪಕ್ಷ ನೋಡಿ ಕೊಟ್ಟಿಲ್ಲ, ಎಲ್ಲರಿಗೂ ಯೋಜನೆಯ ಸವಲತ್ತು ತಲುಪಿಸುವುದು ಸರ್ಕಾರದ ಉದ್ದೇಶ. ಪಕ್ಷ, ಜಾತಿ ಹೊರತುಪಡಿಸಿದ ರಾಜಕಾರಣ ಮಾಡು ವುದು ಪ್ರಧಾನಿಯವರ ಸಂಕಲ್ಪ. ಹಾಗಾಗಿ ಎಲ್ಲರಿಗೂ ಅನುಕೂಲ ಮಾಡಿಕೊಡಲು ಈ ಯಾತ್ರೆ ನಡೆಸಲಾಗುತ್ತಿದೆ ಎಂದರು.

ಭಾರತ ದೇಶ, 2047 ರ ವೇಳೆಗೆ ವಿಶ್ವದಲ್ಲಿ ನಂಬರ್ ಒನ್ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿದೆ. ದೊಡ್ಡ ದೇಶಗಳ ಸಾಲಿನಲ್ಲಿ ಭಾರತ ಎದ್ದು ನಿಲ್ಲಬೇಕು, ವಿಶ್ವದಲ್ಲಿ ನಾವು 5ನೇ ಸ್ಥಾನದಲ್ಲಿ ಇದ್ದೇವೆ. ಮುಂದೆ 2 ಅಥವಾ 3ನೇ ಸ್ಥಾನಕ್ಕೆ ಬರಬೇಕು, ಆ ನಿಟ್ಟಿನಲ್ಲಿ ಕೆಲಸ ಆಗಬೇಕು. ಈ ಉದ್ದೇಶದಿಂದ ಯಾತ್ರೆಯಲ್ಲಿ ಪ್ರಮಾಣವಚನ ಸ್ವೀಕರಿಸಲಾಗುತ್ತಿದೆ ಎಂದರು.

ಕೇಂದ್ರದ ಹಲವಾರು ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ಬಂದಿವೆ. ಇನ್ನು ಹಲವಾರು ಯೋಜನೆಗಳು ಬರಲಿವೆ. ಬರುವ ದಿನಗಳಲ್ಲಿ ಪ್ರತಿಯೊಂದು ಮನೆಗೂ ಸವಲತ್ತು ಸಿಗಬೇಕು. ಬರುವಂತಹ 2-3 ವರ್ಷಗಳಲ್ಲಿ ದೇಶದ 2 ಕೋಟಿ ಮಹಿಳೆಯರು ಲಕ್ಷಾಧಿಪತಿಯಾಗಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂಭಿಯಾಗಬೇಕು ಎಂಬುದು ಯಾತ್ರೆ ಉದ್ದೇಶ ಎಂದು ಹೇಳಿದರು.

ಭಾರತ ಮುಂದುವರೆಯುತ್ತಿರುವ ದೇಶ, ಮುಂದೊಂದು ದಿನ ಮುಂದುವರೆದ ದೇಶ ಆಗಬೇಕು. ಭಾರತ ಎತ್ತರಕ್ಕೆ ಬೆಳೆಯಬೇಕು. ಆ ನಿಟ್ಟಿನಲ್ಲಿ ರಾಜಕಾರಣಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು, ತಮ್ಮ ತಮ್ಮ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕೆಲಸದಲ್ಲಿ ಗೌರವ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ರಸಗೊಬ್ಬರ ರಹಿತ ಕೃಷಿಗೆ ರೈತರು ಹೆಚ್ಚಿನ ಒತ್ತು ನೀಡಬೇಕು, ಈ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು ಎಂಬುದು ಪ್ರಧಾನಿಯವರ ಆಶಯ. ನಾವು ಬೆಳೆಯುವ ಆಹಾರ ಪದಾರ್ಥಗಳು ನಮ್ಮಲ್ಲಿಯೇ ಬಳಕೆಯಾದರೆ ಸಾಲದು, ಅವುಗಳನ್ನು ವಿದೇಶಕ್ಕೆ ಕಳುಹಿಸಬೇಕು ಎಂದ ಅವರು, ವಿದೇಶದಲ್ಲಿ ಪರೀಕ್ಷೆ ಮಾಡಿ ಪದಾರ್ಥ ಬಳಕೆ ಮಾಡುವ ಸಂಪ್ರದಾಯ ಇರುವುದರಿಂದ ಆದಷ್ಟು ರಸಗೊಬ್ಬರಗಳ ಬಳಕೆ ಇಲ್ಲದೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಸುವತ್ತ ರೈತರು ಗಮನ ಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್‌, ಮುಗುಳವಳ್ಳಿ ಗ್ರಾಪಂ ಪಿಡಿಒ ಸುಮ ಉಪಸ್ಥಿತರಿದ್ದರು. 6 ಕೆಸಿಕೆಎಂ 5

ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

Share this article