ಕೆಶಿಪ್‌ನ ಅವೈಜ್ಞಾನಿಕ ಕಾಮಗಾರಿಯಿಂದ ರಾಜ್ಯ ಹೆದ್ದಾರಿ ಜಲಾವೃತ

KannadaprabhaNewsNetwork |  
Published : Jun 16, 2025, 02:27 AM ISTUpdated : Jun 16, 2025, 02:28 AM IST
15ಕೆಎಂಎನ್ ಡಿ11,12 | Kannada Prabha

ಸಾರಾಂಶ

ಕೆಶಿಪ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಕೆ.ಎಂ.ದೊಡ್ಡಿ ಪಟ್ಟಣದ ಮದ್ದೂರು- ಮಳವಳ್ಳಿ ರಾಜ್ಯ ಹೆದ್ದಾರಿ ನೀರಿನಿಂದ ಜಲಾವೃತಗೊಂಡು ವಾಹನ ಸವಾರರು, ಸಾರ್ವಜನಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೆದ್ದಾರಿ ಪಕ್ಕದ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ.

ಬಿ.ಎಸ್. ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕೆಶಿಪ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಪಟ್ಟಣದ ಮದ್ದೂರು- ಮಳವಳ್ಳಿ ರಾಜ್ಯ ಹೆದ್ದಾರಿ ನೀರಿನಿಂದ ಜಲಾವೃತಗೊಂಡು ವಾಹನ ಸವಾರರು, ಸಾರ್ವಜನಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೆದ್ದಾರಿ ಪಕ್ಕದ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ.

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಕುಣಿಗಲ್ ಮಾರ್ಗವಾಗಿ ಮದ್ದೂರು- ಕೆ.ಎಂ.ದೊಡ್ಡಿ - ಮಳವಳ್ಳಿ ಸೇರಿದಂತೆ 7 ತಾಲೂಕುಗಳ ವ್ಯಾಪ್ತಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಗುಜರಾತ್ ಮೂಲದ ಮೈಸೂರು ಬೆಳ್ಳಳ್ಳಿ ಹೈವೆ ಪ್ರೈವೈಟ್ ಲಿಮಿಟೆಡ್ (ಸದ್ಬವ್) ನಿರ್ವಹಿಸಿದೆ.

ಆದರೆ, ಕೆಶಿಪ್ ಕಂಪನಿ ಸುಮಾರು 193.34 ಕಿ ಮೀ ಉದ್ದದ 478.58 ಕೋಟಿ ರು.ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಮಾಡಿ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿತ್ತು. ಭಾರತೀನಗರದಲ್ಲಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಮಳೆಗಾಲದಲ್ಲಿ ನೀರು ಸರಾಗವಾಗಿ ಚರಂಡಿಗೆ ಹರಿಯದೆ ರಸ್ತೆಯಲ್ಲೆ ಕೆರೆಯಂತೆ ನೀರು ನಿಂತು ಸಾಕಷ್ಟು ಅನಾನುಕೂಲಗಳು ಎದುರಾಗಿದೆ.

ಚರಂಡಿ ಕಾಮಗಾರಿಯನ್ನು ಕೆಶಿಪ್ ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಿ ಕೈ ತೊಳೆದುಕೊಂಡಿತು. ಇದರ ಬಗ್ಗೆ ಅಂದಿನ ಯಾವುದೇ ಜನಪ್ರತಿನಿಧಿಗಳು ಪ್ರಶ್ನೆ ಮಾಡಿಲ್ಲ. ಇದು ಜನಪ್ರತಿನಿಧಿಗಳಿಗೆ ಇರುವ ಇಚ್ಛಾಶಕ್ತಿ ತೋರಿಸುತ್ತದೆ.

ಪ್ರತಿ ಬಾರಿಯೂ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಜಲಾವೃತಗೊಂಡು ಅಂಗಡಿ -ಮುಂಗಟ್ಟುಗಳಿಗೆ ನುಗ್ಗಿ ವ್ಯಾಪರಸ್ಥರಿಗೆ ನಷ್ಟ ಉಂಟಾಗುತ್ತಿದ್ದರೂ ಸಹ ಭಾರತೀನಗರ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ 6 ವರ್ಷಗಳ ಹಿಂದೆ ಕೋಟ್ಯಂತರ ರು. ವೆಚ್ಚದಲ್ಲಿ ರಸ್ತೆ ಮತ್ತೆ ಡಾಂಬರೀಕರಣ ಮಾಡಲಾಗಿದೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದ್ದರೂ ಅದಕ್ಕೆ ಕ್ಯಾರೆ ಎನ್ನದೆ ಚರಂಡಿ ನಿರ್ಮಿಸಲಾಗಿದೆ. ಇದನ್ನು ಸರಿಪಡಿಸದಿರುವ ಬಗ್ಗೆ ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಳೆಗಾಲದಲ್ಲಂತೂ ಪಟ್ಟಣದ ಭಾರತೀ ಕಾಲೇಜು ಕಾಂಪ್ಲೆಕ್ಸ್ ಎದುರು ನೀರು ನಿಂತು ರಸ್ತೆ ಸಂಪೂರ್ಣ ಜಲಾವೃತ ಗೊಳ್ಳುತ್ತದೆ. ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದ ಗಾಡಿಗಳು ಸಹ ನೀರಿನಲ್ಲಿ ಮುಳುಗುವಂತಾಗಿದೆ. ರಸ್ತೆಯಲ್ಲಿ ಹೆಚ್ಚು ನೀರು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ಜೊತೆಗೆ ಅಪಘಾತಗಳು ಸಂಭವಿಸಿರುವ ಹಲವು ನಿದರ್ಶನಗಳುಂಟು.

ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮಳೆಗಾಲದಲ್ಲಿ ರಸ್ತೆ ದಾಟಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಅವಾಂತರಗಳಿದ್ದರೂ ಚರಂಡಿಗೆ ಸಮರ್ಪಕವಾಗಿ ನೀರು ಹರಿಯುವಂತೆ ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸದೇ ಇರುವುದಕ್ಕೆ ಹಿಡಿ ಶಾಪ ಹಾಕುತಿದ್ದಾರೆ. ಮಳೆಗಾಲದಲ್ಲಿ ಭಾರತೀ ಕಾಲೇಜು ಮುಂಭಾಗದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಕೆರೆಯಂತೆ ನೀರು ನಿಲ್ಲುತ್ತದೆ. ಜೊತೆಗೆ ಮಳೆ ನೀರು ಅಂಗಡಿಗಳಿಗೂ ನುಗ್ಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಬೇಕು.

- ಶೇಖರ್, ಮಾಲೀಕರು, ವಿ.ಬಿ. ಬೇಕರಿ, ಭಾರತೀನಗರಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಭಾರತೀ ಕಾಲೇಜು ಮುಂಭಾಗ ಕೆಶಿಪ್ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ ಪರಿಣಾಮ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಇದಕ್ಕೆ ಮುಕ್ತಿ ದೊರಕಬೇಕು.

- ರಘು ವೆಂಕಟೇಗೌಡ, ಅಧ್ಯಕ್ಷ, ಆಸರೆ ಸೇವಾ ಟ್ರಸ್ಟ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ