- ಹೊನ್ನಾಳಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಹಿರೇಕಲ್ಮಠದಲ್ಲಿ ಲಿಂಗೈಕ್ಯ ಗುರುಗಳ ಸಂಸ್ಮರಣಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ದತ್ತಿ ಉಪನ್ಯಾಸ, ಜೊತೆಗೆ ಇಡೀ ರೈತ ಸಮುದಾಯಕ್ಕೆ ಹೆಚ್ಚು ಉಪಯೋಗ ಆಗಲಿರುವ ರಾಜ್ಯಮಟ್ಟದ ಕೃಷಿ ಮೇಳವನ್ನು ಫೆ.27, 28 ಮತ್ತು ಮಾರ್ಚ್ 1, 2ರಂದು ನಡೆಸಲಾಗುವುದು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಇತ್ತೀಚೆಗೆ ಶಾಸಕ ಡಿ.ಜಿ. ಶಾಂತನಗೌಡ ಅಧ್ಯಕ್ಷತೆ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾಹಿತಿ ನೀಡಿದರು. ಫೆ.27ರಿಂದ ಲಿಂಗೈಕ್ಯ ಶೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೇ, 4 ದಿನಗಳ ಕೃಷಿಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರಾಜ್ಯದ ರೈತ ಸಾಧಕರು, ವಿಷಯ ತಜ್ಞರು ಹಾಗೂ ನೂತನವಾಗಿ ಆವಿಷ್ಕಾರಗೊಂಡ ಕೃಷಿ ಉಪಕರಣಗಳು, ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಕೃಷಿ ಕ್ಷೇತ್ರದ ಬಗ್ಗೆ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಮುಖಂಡರಾದ ಬಿ.ಸಿದ್ದಪ್ಪ, ಡಾ.ಈಶ್ವರ ನಾಯ್ಕ, ಎಚ್.ಎ. ಉಮಾಪತಿ, ರೈತ ಮುಖಂಡ ಹಿರೇಮಠದ ಬಸವರಾಜಪ್ಪ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
- - -
(ಬಾಕ್ಸ್) * ಕೃಷಿಮೇಳಕ್ಕೆ ಎಲ್ಲ ಅಧಿಕಾರಿಗಳು ಕಂಕಣಬದ್ಧ: ಡಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಅಧಿಕಾರಿಯಾಗಿ ಹೇಳುವುದಾದರೆ ಫೆ.13ರಂದು ಹಾವೇರಿಯಲ್ಲಿ ಸರ್ಕಾರದ ದೊಡ್ಡ ಕಾರ್ಯಕ್ರಮ, ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಬದಲ್ಲಿ ಫೆ.14 ಮತ್ತು 15ರಂದು ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಗಳು ಇವೆ. ಆದಕಾರಣ ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿ ಮೇಳದ ತಯಾರಿಗೆ ಕಾಲಾವಕಾಶ ಕಡಿಮೆಯಾಗುವ ಸಂದರ್ಭವಿದು. ಸ್ವಾಮೀಜಿ, ಸ್ಥಳೀಯ ಶಾಸಕರು ಸೇರಿ ಜಿಲ್ಲಾ ಸಚಿವರೊಂದಿಗೆ ಸಾಧಕ -ಬಾಧಕಗಳನ್ನು ಚರ್ಚಿಸೋಣ. ಅನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ. ಕೃಷಿಮೇಳಕ್ಕೆ ಎಲ್ಲ ಅಧಿಕಾರಿಗಳು ಕಂಕಣಬದ್ಧ ಎಂದರು.- - -
ಫೆ.27ರಿಂದ ರಾಜ್ಯಮಟ್ಟದ ಕೃಷಿ ಮೇಳ ಆಯೋಜನೆ ಕುರಿತು ಹಿರೇಕಲ್ಮಠ ಶ್ರೀ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಧಿಕಾರಿ, ಜಿಪಂ ಸಿಇಒ, ರಾಜಕೀಯ ಮುಖಂಡರು, ಅಧಿಕಾರಿಗಳು ಇದ್ದರು.