೩ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಸಮ್ಮೇಳನ: ಡಾ. ರಫೀ

KannadaprabhaNewsNetwork | Published : Mar 2, 2024 1:50 AM

ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಮಹಾಸಮ್ಮೇಳನ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಕ್ರಮ ಮಾ. ೩ರಂದು ಬೆಳಗಾವಿಯ ಸನ್ಮಾನ ಹೋಟೇಲ್ ಬಳಿ ಇರುವ ಗಾಂಧಿ ಭವನದಲ್ಲಿ ನಡೆಯಲಿದೆ.

ಗದಗ: ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಮಹಾಸಮ್ಮೇಳನ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಕ್ರಮ ಮಾ. ೩ರಂದು ಬೆಳಗಾವಿಯ ಸನ್ಮಾನ ಹೋಟೇಲ್ ಬಳಿ ಇರುವ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಿ.ಎಂ. ರಫೀ ಹೇಳಿದರು.

ಅವರು ನಗರದ ಜಿಲ್ಲಾ ಘಟಕದಲ್ಲಿ ಗುರುವಾರ ಮಹಾ ಸಮ್ಮೇಳನದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಹಾ ಸಮ್ಮೇಳನ ನಡೆಯಲಿದ್ದು, ರಾಜ್ಯಾದ್ಯಂತ ಸರ್ಕಾರಿ ಮುಸ್ಲಿಂ ನೌಕರರು ಪಾಲ್ಗೊಳ್ಳಲಿದ್ದಾರೆ. ಗದಗ ಜಿಲ್ಲೆಯ ಸರ್ಕಾರಿ ಮುಸ್ಲಿಂ ನೌಕರರು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಸಮ್ಮೇಳನವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಶಾಸಕ ಆಸಿಫ್ (ರಾಜು) ಸೇಠ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಸತೀಶ್ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳಕರ್, ರಹೀಮ್‌ಖಾನ್, ಬಿ.ಝಡ್. ಜಮೀರ್ ಅಹ್ಮದ್‌ಖಾನ್, ಮಧು ಬಂಗಾರಪ್ಪ, ಶಾಸಕರಾದ ತನ್ವೀರ್ ಸೇಠ್, ಎನ್.ಎ. ಹಾರಿಸ್, ಕನೀಜ್ ಫಾತಿಮಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್‌ಹುಸೇನ್ ಆಗಮಿಸುವರು ಎಂದರು.

ಗೌರವಾನ್ವಿತ ಅತಿಥಿಗಳಾಗಿ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಪ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಫಿರೋಜ್ ಸೇಠ್, ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಶಾಸಕರಾದ ರಿಜ್ವಾನ್ ಅರ್ಶದ್, ಇಕ್ಬಾಲ್‌ಹುಸೇನ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಮಾಜಿ ಸಚಿವರಾದ ಅಬ್ದುಲ್ ಹಕೀಮ್ ಹಿಂಡಸಗೇರಿ ಅಲ್ಲದೆ ಚುನಾಯಿತ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಕೆಎಸ್‌ಐ, ಎಂ.ಇ.ಡಬ್ಲ್ಯೂ.ಎ (ಮೇವಾ) ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಸಮಾಜ ಮುಖಂಡರು ಪಾಲ್ಗೊಳ್ಳುವರು.

ಸಮ್ಮೇಳನದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಜಿಲ್ಲಾ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಸನ್ಮಾನ ನಡೆಯಲಿದ್ದು, ಗದಗ ಜಿಲ್ಲೆಯ ಸಮಸ್ತ ಸರ್ಕಾರಿ ಮುಸ್ಲಿಂ ನೌಕರರು ಸಮ್ಮೇಳನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಈ ವೇಳೆ ರಾಜ್ಯ ಘಟಕದ ಉಪಾಧ್ಯಕ್ಷ ನಿಯಾಜ್ ಅಹ್ಮದ್ ಹಂಚಿನಮನಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಶೀದ್, ಮೆಹಬೂಬ ತಾಳಿಕೋಟಿ, ಅಬ್ದುಲ್ ಮುನ್ನಾಫ ಬಿಜಾಪುರ, ಮೋದಿನಸಾಬ ಬುಕ್ಕಿಟಗಾರ ಇನ್ನೂ ಅನೇಕರು ಇದ್ದರು.