ಹಾವೇರಿ: ಮೌಲಾನಾಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಕುರಿತು ರಾಜ್ಯಮಟ್ಟದ ಸಮ್ಮೇಳನವನ್ನು ನಗರದ ರಜನಿ ಕನ್ವೆನ್ಷನ್ ಹಾಲ್ನಲ್ಲಿ ಜೂ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಉಲಮಾ ಸೊಸೈಟಿ ಕಾರ್ಯದರ್ಶಿ ಹಜರತ್ಅಲಿ ಸುಳ್ಳಳ್ಳಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.14ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಸಮ್ಮೇಳನ ಜರುಗಲಿದೆ. ಇದರಲ್ಲಿ ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಶಿಕ್ಷಣ, ನೈತಿಕತೆ, ಯುವ ಜನರ ಸಬಲೀಕರಣ ಕುರಿತು ಚರ್ಚಿಸಲಾಗುತ್ತದೆ. ಶಾಂತಿ, ಸಹೋದರತೆ, ಸರ್ವಧರ್ಮದ ಸಮಭಾವಗಳ ಸಂದೇಶ ಸಾರಲಾಗುತ್ತದೆ. ರಾಷ್ಟ್ರೀಯ ಏಕತೆ, ಸಂವಿಧಾನ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು. ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ, ಕಲುಬುರಗಿಯ ಹಜರತ್ ಖ್ವಾಜಾ ಬಂದೇನವಾಜ ದರ್ಗಾದ ಧರ್ಮಗುರು ಹಾಫೀಜ್ ಸೈಯದ್ ಮೊಹಮ್ಮದಅಲಿ ಅಲ್ಹುಸೇನಿ ಸಜ್ಜದಾ ನಶೀನ್ ಅವರು, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲೆಯ ವಿವಿಧ ಉಲಮಾಗಳು, ಎಲ್ಲ ಅಂಜುಮನ್-ಎ-ಇಸ್ಲಾಂ ಕಮಿಟಿ ಮುಖ್ಯಸ್ಥರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಮೌಲ್ವಿಗಳು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ 400, ರಾಜ್ಯದಲ್ಲಿ 900 ಉಲಮಾಗಳು ಇದ್ದಾರೆ. ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಇಲ್ಲಿಂದಲೇ ಸೊಸೈಟಿ ಆರಂಭಿಸಿದ್ದು, ಅತಿ ಹೆಚ್ಚು ಮೌಲ್ವಿಗಳನ್ನು ಈ ಜಿಲ್ಲೆ ಹೊಂದಿದೆ. ಆದ್ದರಿಂದ ಎಲ್ಲಾ ಮುಸಲ್ಮಾನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಸೊಸೈಟಿ ಅಧ್ಯಕ್ಷ ಹಜರತ್ ಸೈಯದ್ ಮೈನುದ್ದೀನ್ ಸರಖಾಜಿ, ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಅಲೀಮ್ಸಾಬ್, ಸದಸ್ಯರಾದ ಸೈಯದ್ ದಾದಾಪೀರ್, ಮೌಲಾನಾ ಇಬ್ರಾಹಿಂಸಾಬ್, ಹಾಫೀಜ್ ಸಾಕಮುಲ್ಲಾ, ಜಾಫರ್ರಜಾ, ಮಹ್ಮದ್ ರಿಜ್ವಾನ್, ಗುಲಾಮ್ ಮುಸ್ತಫಾ, ಇನಾಯತ್ಉಲ್ಲಾ, ರಹಮತ್ರಜಾ, ಜಹಿಮುದ್ದೀನ, ಹಾವೇರಿ ಅಂಜುಮನ್ ಕಮಿಟಿ ಸದಸ್ಯ ಜಮೀರ್ ಅಹ್ಮದ್ ಜಿಗರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.