ಬಳ್ಳಾರಿ: ಮಹಾಮಹಿಮ ವರಗುರು ಚರಂತಪ್ಪಜ್ಜ ಮಹಾಸ್ವಾಮಿಗಳ 22ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ಪಾರ್ವತಿನಗರದ ಬಸವಭವನದಲ್ಲಿ ಗುರುವಾರ ಸಂಜೆ ವೇದಮಂತ್ರ ಘೋಷಗಳ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯ ಶ್ರೀಗುರು ದೊಡ್ಡಬಸವೇಶ್ವರ ಅವತಾರವಾಗಿ ಬಂದು ನೆಲೆಸಿದ ಚರಂತಪ್ಪಜ್ಜನವರು ಎಲ್ಲ ವರ್ಗಗಳ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದರು. ನಾಡಿನ ಅನೇಕ ಜಿಲ್ಲೆಗಳ ಭಕ್ತರು ನಂದಿಪುರಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಚರಂತಪ್ಪಜ್ಜ ಮಹಾಸ್ವಾಮಿಗಳ ಪುಣ್ಯೋತ್ಸವ ಸಮಾರಂಭ ಬಳ್ಳಾರಿ ಭಾಗದ ಭಕ್ತರ ಪರಿಶ್ರಮದಿಂದ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡರಾದ ಪಲ್ಲೇದ ಲಲಿತಮ್ಮನವರು ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ಸ್ಮರಣೋತ್ಸವದ ಮೊದಲ ದಿನ ಮಹಿಳಾ ಸಬಲೀಕರಣ, ಯೋಗಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ಜರುಗಿತು. ನೈಸರ್ಗಿಕ ಚಿಕಿತ್ಸಕಿ ಡಾ.ಎನ್.ಎಲ್.ಸುಮಲತಾ, ಮಹಿಳೆಯರು ಒತ್ತಡದ ಬದುಕಿನಲ್ಲಿ ಆರೋಗ್ಯ ಸುಧಾರಣೆಗೆ ಯೋಗ ಹಾಗೂ ಧ್ಯಾನ ಎಷ್ಟು ಪೂರಕ ಎಂಬುದನ್ನು ವಿವರಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ ಡಾ.ಎಚ್.ಎಂ.ಉಮಾ ಹಾಗೂ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ವಚನಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮ ಮುನ್ನ ಅಕ್ಕನ ಬಳಗದಿಂದ ಸಿದ್ಧಾಂತ ಶಿಖಾಮಣಿ ಲಲಿತ ಸಹಸ್ರನಾಮ ಪಾರಾಯಣ ಜರುಗಿತು. ವೀರಶೈವ ಸಮಾಜದ ಹಿರಿಯ ಮುಖಂಡರಾದ ಪಲ್ಲೇದ ಪಂಪಾಪತೆಪ್ಪ, ಮಸೀದಿಪುರ ಸಿದ್ಧರಾಮನಗೌಡ, ಹೊನ್ನನಗೌಡ ಬಲಗುಡ್ಡ, ವಿಭೂತಿ ಎರಿಸ್ವಾಮಿ, ಮದಿರೆ ಕುಮಾರಸ್ವಾಮಿ, ಎರಿಸ್ವಾಮಿ ಬೂದಿಹಾಳುಮಠ ಇದ್ದರು.