ರೈತಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಮಂಜೂರಾದ ಯಂತ್ರೋಪಕರಣ, ಸಲಕರಣೆ ವಿತರಣೆಕನ್ನಡಪ್ರಭ ವಾರ್ತೆ ಕುಮಟಾ

ಸರ್ಕಾರವು ರೈತರಿಗೆ ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದೊಟ್ಟಿಗೆ ವಿತರಣೆ ಮಾಡುತ್ತಿದೆ. ಸೌಲಭ್ಯಗಳನ್ನು ಬಳಸಿಕೊಂಡು ರೈತರು ಹೆಚ್ಚಿನ ಆದಾಯಗಳಿಸಬೇಕು ಮತ್ತು ಕೃಷಿಯನ್ನು ಬಿಡದೆ ಮುಂದುವರೆಸಿಕೊಂಡು ಹೋಗಬೇಕು ಎಂದು ಶಾಸಕ ದಿನಕರ ಕೆ. ಶೆಟ್ಟಿ ಹೇಳಿದರು.

ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ಆಯೋಜಿಸಿದ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕಿನ ರೈತಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಮಂಜೂರಾದ ಕೃಷಿ ಯಂತ್ರೋಪಕರಣ ಮತ್ತು ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ತಾಲೂಕಿನ ೧೪ ರೈತ ಕುಟುಂಬದವರಿಗೆ ಯಂತ್ರೋಪಕರಣಗಳಿಗೆ ಸರ್ಕಾರದಿಂದ ₹೯,೩೭,೫೦೦ ವೆಚ್ಚದ ಸಹಾಯಧನ ಅನುದಾನದಡಿ ಯಂತ್ರೋಪಕರಣಗಳನ್ನು ಮತ್ತು ೫ ರೈತರಿಗೆ ₹೯೭,೧೪೫ ವೆಚ್ಚದ ತುಂತುರು ನೀರಾವರಿ ಸಾಮಗ್ರಿ ವಿತರಿಸಲಾಗಿದೆ ಎಂದರು.

ಹಿಂದೆ ಎತ್ತುಗಳಿಂದ ಉಳುಮೆ ಮಾಡುತ್ತಿದ್ದೆವು. ಆಧುನಿಕ ಯುಗದಲ್ಲಿ ಸಾಗುತ್ತಿರುವ ನಾವು ಯಂತ್ರೋಪಕರಣಗಳ ಬಳಕೆ ಮಡಿ ಸುಸ್ಥಿರ ಕೃಷಿ ಮಾಡುತ್ತಿದ್ದೇವೆ. ಎಸ್ಸಿ-ಎಸ್ಟಿಗಳಿಗೆ ಶೇ. ೯೦ ಉಳಿದವರಿಗೆ ೫೦ ಪ್ರತಿಶತ ಸಹಾಯಧನದಲ್ಲಿ ಯಂತ್ರೋಪಕರಣ ನೀಡುತ್ತಿದ್ದೇವೆ. ರೈತರು ತಾವು ಪಡೆದ ಯಂತ್ರೋಪಕರಣದ ಗುಣಮಟ್ಟ ಪರೀಕ್ಷಿಸಿಕೊಳ್ಳಿ, ದೋಷಗಳಿದ್ದರೆ ನನಗೆ ತಿಳಿಸಿ, ದೋಷ ಪರಿಹರಿಸಿಕೊಡುತ್ತೇನೆ. ಯಾಂತ್ರಿಕ ಕೃಷಿಯ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಕೃಷಿ ಉತ್ಪನ್ನ ಬೆಳೆಯುವಂತಾಗಲಿ ಎಂದರು.


ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ವೆಂಕಟೇಶಮೂರ್ತಿ ಟಿ.ಸಿ., ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೆಶಕ ಚಂದ್ರಕುಮಾರ, ಚಂದ್ರಕಲಾ ಎಸ್. ಬರ್ಗಿ, ಕೃಷಿ ಅಧಿಕಾರಿಗಳಾದ ಲಕ್ಷ್ಮೀ ದಳವಾಯಿ, ಆನಂದ, ಆತ್ಮ ಯೋಜನೆ ಸಿಬ್ಬಂದಿ ಮತ್ತು ಇಲಾಖಾ ಸಿಬ್ಬಂದಿ ಹಾಗೂ ರೈತರು ಇದ್ದರು.