ಕನ್ನಡಪ್ರಭ ವಾರ್ತೆ ದಾವಣಗೆರೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಆನಂದ್ ಪಿಯು ಕಾಲೇಜು ಆಶ್ರಯದಲ್ಲಿ ಸೆ.18ರಿಂದ 20 ರವರೆಗೆ 2025-26ನೇ ಸಾಲಿನ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಡಿ.ಪಳನಿವೇಲು ತಿಳಿಸಿದರು.
ಸೆ.18ರ ಸಂಜೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಬಿ.ದೇವೇಂದ್ರಪ್ಪ, ಕೆ.ಅಬ್ದುಲ್ ಜಬ್ಬಾರ್, ಪಿಯು ಶಿಕ್ಷಣ ನಿರ್ದೇಶಕ ಎಸ್. ಭರತ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಇತರರು ಭಾಗವಹಿಸುವರು ಎಂದರು.
ಸೆ.19ರಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ನಾಕೌಟ್ ಮಾದರಿಯಲ್ಲಿ ಜಿಲ್ಲಾ ಕ್ರೀಡಾಂಗಣ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಮೈದಾನ, ತರಳಬಾಳು ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಭಾಗವಹಿಸುವ ಎಲ್ಲ ಆಟಗಾರರು, ವ್ಯವಸ್ಥಾಪಕರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸೆ.20ರ ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಆನಂದ್ ಪೋತಿನ, ಅವಿನಾಶ್ ಜೆ. ನಾಯ್ಕ, ಎನ್.ಓಹಿಲೇಶ್ವರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಎನ್.ಓಹಿಲೇಶ್ವರ್, ಪ್ರಾಚಾರ್ಯರಾದ ಅವಿನಾಶ್ ಜೆ. ನಾಯ್ಕ, ಸುರೇಶ್, ಪ್ರದೀಪ್ ಕುಮಾರ್, ಕುಮಾರನಾಯ್ಕ, ಜೆ.ಶಿವಪ್ಪ ಇತರರು ಇದ್ದರು.- - -
-17ಕೆಡಿವಿಜಿ47: ಫುಟ್ಬಾಲ್ ಪಂದ್ಯಾವಳಿ ಕುರಿತು ಡಿ.ಪಳನಿವೇಲು ಮಾಹಿತಿ ನೀಡಿದರು.