ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾರಕ ಆದೇಶ ಕೈಬಿಡಲು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಮನವಿ

KannadaprabhaNewsNetwork | Published : Jun 28, 2025 12:21 AM

ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ಉಚಿತ ಶಿಕ್ಷಣ ನೀಡುತ್ತಿದ್ದು, ಸರ್ಕಾರ ಮಾಡುವ ಶಿಕ್ಷಣ ಸೇವೆಯನ್ನು ಈ ಸಂಸ್ಥೆಗಳು ಮಾಡಿವೆ.

ಹಾವೇರಿ: ಸರ್ಕಾರವು ಇತ್ತೀಚೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾದಂತಹ ಆದೇಶಗಳನ್ನು ಹೊರಡಿಸಿದ್ದು, ಈ ಆದೇಶಗಳನ್ನು ಹಿಂಪಡೆಯುವಂತೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ ಹತ್ತು ವರ್ಷಗಳಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಲ್ಲ. ಅತಿಥಿ ಶಿಕ್ಷಕರನ್ನು ನೀಡಿಲ್ಲ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಿಕ್ಷಕರ ವಾರ್ಷಿಕ ವೇತನವನ್ನು ತಡೆ ಹಿಡಿಯುವಂತೆ ಹಾಗೂ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ವೇತನಾನುದಾನವನ್ನೇ ಹಿಂಪಡೆಯುವಂತೆ ಆದೇಶ ಮಾಡಿರುವುದು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮರಣಶಾಸನವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ಉಚಿತ ಶಿಕ್ಷಣ ನೀಡುತ್ತಿದ್ದು, ಸರ್ಕಾರ ಮಾಡುವ ಶಿಕ್ಷಣ ಸೇವೆಯನ್ನು ಈ ಸಂಸ್ಥೆಗಳು ಮಾಡಿವೆ. ಅಂತಹ ಶಿಕ್ಷಣ ಸಂಸ್ಥೆಗಳು ಸರ್ಕಾರದ ಈ ಆದೇಶಗಳಿಂದ ಮುಚ್ಚುವ ಹಂತಕ್ಕೆ ಬಂದಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಸರ್ಕಾರವು ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆಯಬೇಕೆಂದು ಮಾಧ್ಯಮಿಕ ನೌಕರರ ಸಂಘ ಆಗ್ರಹಿಸಿದೆ.

ಈ ವೇಳೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಪಿ. ಬಣಕಾರ, ಕಾರ್ಯದರ್ಶಿ ಎನ್.ಎನ್. ಕುಂದೂರ, ಎಂ.ಬಿ. ರಮೇಶ, ಆರ್.ಎಚ್. ಬೆಟ್ಟಳ್ಳೇರ, ಕುಮಾರ ಗಾಣಗೇರ, ಡಿ.ಡಿ. ಲಂಗೋಟಿ, ದೇವರಾಜ ಕರೂರ, ವಿ. ರವಿ, ಎಸ್.ಡಿ. ಪರಡ್ಡಿ, ಜಿ. ಹನುಮಂತಪ್ಪ, ಯು.ಎನ್. ಚತ್ರದ, ಎಂ.ಎಸ್. ಕೆಂಚನಗೌಡರ, ಎಂ.ಎಸ್. ಶಾಂತಗಿರಿ, ರಾಕೇಶ ಜಿಗಳಿ, ಆರ್.ಎಚ್. ದೊಡ್ಡಮನಿ, ಅಕ್ಕಮಹಾದೇವಿ ಪೂಜಾರ, ಜೆ.ಎಸ್. ಹೇರೂರ, ವಿದ್ಯಾಶ್ರೀ ಪಾಟೀಲ, ಎಸ್.ಡಿ. ಚವ್ಹಾಣ ಇತರರು ಇದ್ದರು.